- ದಿಢೀರ್ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ನೀಡಿರುವ ಧನಕರ್
- ಆರೋಗ್ಯ ಸಮಸ್ಯೆಯ ನೆಪ ಹೇಳಿ ರಾಜಿನಾಮೆ ನೀಡಿದ ಧನಕರ್
- 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿ ಅಧಿಕಾರ ಸ್ವೀಕರಿಸಿದ್ದ ಧನಕರ್
ದೇಶದ ಪ್ರಮುಖ ಸಾಂವಿಧಾನಿಕ ಹುದ್ದೆ ಆಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ನಿನ್ನೆ ತಡರಾತ್ರಿ ರಾಜೀನಾಮೆ ನೀಡಿದ್ದಾರೆ.
ತಮ್ಮ ಆರೋಗ್ಯದ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಘೋಷಿಸಿದ್ದಾರೆ. ರಾಜೀನಾಮೆ ಪತ್ರವನ್ನು ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ಕಳುಹಿಸಿದ್ದಾರೆ.
ಇನ್ನು ರಾಷ್ಟ್ರಪತಿ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ ಮೇಲೆ ಖಾಲಿ ಆಗಲಿರುವ ಉಪರಾಷ್ಟ್ರಪತಿ ಹುದ್ದೆಗೆ ಸಾಂವಿಧಾನಿಕ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಇನ್ನು ಸೋಮವಾರದ ಅಧಿವೇಶನದಲ್ಲಿ ಜಗದೀಪ್ ಧನಕರ್ ಸಂಜೆಯವರೆಗೂ ರಾಜ್ಯಸಭೆಯಲ್ಲಿ ಹಾಜರಿದ್ದರು.
ಅಲ್ಲದೆ ಕೆಲವೇ ದಿನಗಳ ಹಿಂದಷ್ಟೇ ನಾನು 2027ರಲ್ಲಿ ನಿವೃತ್ತಿ ತೆಗೆದುಕೊಳ್ಳುವ ಯೋಚನೆಯಿದೆ ಎಂದು ಹೇಳಿದ್ದರು.

ಅದಕ್ಕೂ ಮೊದಲು ದೇವರ ಮಧ್ಯಪ್ರವೇಶದಿಂದ ಬೇಗ ಕೆಳಕ್ಕೆ ಇಳಿಯಬಹುದು ಎಂದು ಖುದ್ದು ಜಗದೀಪ್ ಧನಕರ್ ಸೂಚನೆ ನೀಡಿದ್ದರು.
ಆದರೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾದ ಮೊದಲ ದಿನವೇ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ವಲಯದಲ್ಲಿ ದಿಗ್ಬ್ರಮೆ ಉಂಟಾಗುವಂತೆ ಮಾಡಿದ್ದಾರೆ.
ಇದೀಗ ಅವರ ಹಠಾತ್ ನಿರ್ಧಾರ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ. ಅವರು ವೃತ್ತಿಯಲ್ಲಿ ವಕೀಲರಾಗಿದ್ದು,
ನಂತರ ರಾಜಕೀಯದಲ್ಲಿ ಪ್ರಮುಖ ಹುದ್ದೆಗಳಿಗೆ ಏರಿ ಅಧಿಕಾರ ಸ್ವೀಕರಿಸಿದ್ದ ಧನಕರ್, ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿ ಹಾಗೂ ನಂತರದಲ್ಲಿ 2022ರಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಆದರೆ ಇದೀಗ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ್ದು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.
ಇನ್ನು ಅನಾರೋಗ್ಯದ ಕಾರಣ ಹೇಳಿ ಸಂವಿಧಾನದ 67 ( ಎ) ವಿಧಿಯ ಅಡಿಯಲ್ಲಿ ರಾಜೀನಾಮೆ ನೀಡಿದ್ದಾರೆ.
ಅಲ್ಲದೆ ರಾಷ್ಟ್ರಪತಿಗಳ ಸಹಕಾರ ಮತ್ತು ಸೌಹಾರ್ದಯುತ ಸಂಬಂಧಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಅವರು, ತನ್ನ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಬಯಸಿ ಹಾಗೂ ವೈದ್ಯರು ನೀಡಿರುವ ವೈದ್ಯಕೀಯ ಸಲಹೆಯನ್ನು ಅನುಸರಿಸಲು ನಾನು ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡ ಬಯಸುತ್ತೇನೆ.
ಮಹಾನ್ ಪ್ರಜಾಪ್ರಭುತ್ವದಲ್ಲಿ ಉಪಾಧ್ಯಕ್ಷರಾಗಿ ನಾನು ಗಳಿಸಿದ ಅಮೂಲ್ಯ ಅನುಭವಗಳಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ ಮತ್ತು ಬೆಂಬಲ ಅತ್ಯಮೂಲ್ಯ ವಾದದ್ದು.
ಈವರೆಗಿನ ನನ್ನ ಅಧಿಕಾರಾವಧಿಯಲ್ಲಿ ಅವರಿಂದ ಬಹಳಷ್ಟು ಕಲಿತಿದ್ದೇನೆ. ಇನ್ನು ಸಂಸತ್ತಿನ ಸದಸ್ಯರುಗಳಿಂದ ದೊರೆತ ಪ್ರೀತಿ, ವಿಶ್ವಾಸ ಮತ್ತು ಗೌರವ ನನ್ನ ಜೀವನದುದ್ದಕ್ಕೂ ಮನದಲ್ಲಿ ಉಳಿಯುತ್ತದೆ.
ನನ್ನ ಅಧಿಕಾರದ ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಅಭಿವೃದ್ಧಿಯನ್ನು ವೀಕ್ಷಿಸಲು ಹಾಗೂ ಭಾಗವಹಿಸಲು ದೊರೆತಿದ್ದು ನನಗೆ ಅದೃಷ್ಟ ಮತ್ತು ತೃಪ್ತಿಯ ವಿಷಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಆದರೆ ಕೆಲವು ಮೂಲಗಳ ಪ್ರಕಾರ ಕಳೆದ ವರ್ಷ ವಿರೋಧ ಪಕ್ಷಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿದ್ದವು.
ಹಾಗಾಗಿ ಈ ವರ್ಷ ಕೇಂದ್ರ ಸರ್ಕಾರವೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿತ್ತು.
ಹೀಗಾಗಿ ಕೇಂದ್ರ ಸರ್ಕಾರದೊಂದಿಗಿನ ಜಟಾಪಟಿಗೆ ಬೇಸರ ಮೂಡಿ ಜಗದೀಪ್ ಧನಕರ್ ಅವರು ಅನಾರೋಗ್ಯದ ಕಾರಣ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.