ನವದೆಹಲಿ, ಡಿ. 26: ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ರೈತರಿಗೆ 18 ಸಾವಿರ ಕೋಟಿ ಕಂತಿನ ರೂಪದಲ್ಲಿ ಬಿಡುಗಡೆ ಮಾಡಿದರು. ಅದರ ಜೊತೆಯಲ್ಲೇ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಆರೋಗ್ಯ ವಿಮೆ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಧಾನಿ ಮೋದಿ ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ವಂಚಿತರಾಗಿದ್ದ ಕಾಶ್ಮೀರದ ಜನರು ಕೂಡ ಇನ್ಮುಂದೆ ಆರೋಗ್ಯ ವಿಮೆ ಪಡೆಯಬಹುದಾಗಿದೆ. ಈ ಯೋಜನೆಯು ಆರೋಗ್ಯದ ರಕ್ಷಣೆಯನ್ನು ಒದಗಿಸುತ್ತದೆ. ಆರ್ಥಿಕ ಸಂಕಷ್ಟದಲ್ಲಿ ಇರುವ ಕುಟುಂಬಗಳಿಗೂ ಯೋಜನೆ ಅಡಿಯಲ್ಲಿ ಕಡಿಮೆ ಬೆಲೆಯಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ.
ಈ ಯೋಜನೆಯಿಂದ ಜಮ್ಮು ಹಾಗೂ ಕಾಶ್ಮೀರದ ನಿವಾಸಿಗಳಿಗೆ ಉಚಿತ ವಿಮಾ ರಕ್ಷಣೆ ಒದಗಿಸಲಿದೆ ಮತ್ತು ಇದರ ಫಲಾನುಭವಿಗಳಿಗೆ 5 ಲಕ್ಷ ರೂ. ಕ್ಯಾಶ್ಲೆಸ್ ಆರೋಗ್ಯ ರಕ್ಷಣೆ ಪಡೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.