ಬೆಂಗಳೂರು, ಡಿ. 8: ರಾಜ್ಯದಲ್ಲಿ ಹೆಚ್ಚುತ್ತಿರುವ ಜೂಜಾಟ ಮತ್ತು ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಜರುಗಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಮ್ಮ ಸರ್ಕಾರ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಿದ್ದು, ಅನೇಕ ಒತ್ತಡಗಳು ನಮ್ಮ ಮೇಲೆ ಬಂದಿವೆ. ಆದರೆ ನಾವು ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಈ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದ್ದಾರೆ.
ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಈಶ್ವರ್ ಖಂಡ್ರೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜೂಜಾಟ ಒಂದು ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ಕಡಿವಾಣ ಹಾಕಲೇಬೇಕಾದ ಅಗತ್ಯವಿದೆ. ಹಿಂದಿನ ಸರ್ಕಾರಗಳಿಗಿಂತಲೂ ನಮ್ಮ ಸರ್ಕಾರ ಬಿಗಿಯಾದ ಕ್ರಮ ತೆಗೆದುಕೊಂಡಿದೆ.
ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬಂಧ ಈಗಾಗಲೇ ರಾಷ್ಟ್ರೀಯ ಕಾನೂನು ಕಾಲೇಜಿನ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಈ ಕಾನೂನು ರಾಜ್ಯದಲ್ಲಿ ಜಾರಿಯಾಗಲಿದೆ. ಇದು ಕೇವಲ ಕಾನೂನಿನಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಜನರಲ್ಲೂ ಜಾಗೃತಿ ಬರಬೇಕೆಂದು ಮನವಿ ಮಾಡಿದರು.
ಡ್ರಗ್ಸ್ ಪ್ರಕರಣಗಳನ್ನು ಬೇರುಮಟ್ಟದಿಂದ ಕಿತ್ತುಹಾಕುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಬಿಗಿಯಾದ ಕಾನೂನು ತರಲು ಮಾತುಕತೆ ನಡೆಸಲಾಗಿದೆ. ಸರ್ಕಾರ ತೆಗೆದುಕೊಂಡಿರುವ ಕಾನೂನು ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಗುಡುಗಿದರು.
ಎನ್ಡಿಪಿಎಸ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಅಕಾರ ನಮಗಿಲ್ಲ. ಅದು ಸಂಸತ್ನಲ್ಲಿ ತಿದ್ದುಪಡಿ ಮಾಡಬೇಕು. ಈ ಕಾಯ್ದೆಯಡಿ ಕ್ರಮ ಜರುಗಿಸಲು ನಮಗೆ ಅವಕಾಶವಿದೆ ಎಂದರು.
ಎನ್ಡಿಪಿಎಸ್ ಕಾಯ್ದೆಯಡಿ 2017ರಲ್ಲಿ 1126 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1095 ಪ್ರಕರಣಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, 197 ಪ್ರಕರಣಗಳಿಗೆ ಶಿಕ್ಷೆಯಾಗಿದೆ. 2018ರಲ್ಲಿ 1031 ಪ್ರಕರಣಗಳು ದಾಖಲಾಗಿದ್ದರೆ, 951 ಪ್ರಕರಣಗಳ ವಿರುದ್ಧ ಚಾರ್ಜ್ಶೀಟ್ ದಾಖಲಾಗಿ 167 ಮಂದಿಗೆ ಶಿಕ್ಷೆಯಾಗಿದೆ.
2019ರಲ್ಲಿ 1161 ಪ್ರಕರಣಗಳ ಪೈಕಿ 1374 ಪ್ರಕರಣಗಳಿಗೆ ಚಾರ್ಜ್ಶೀಟಾಗಿದ್ದು, 256 ಪ್ರಕರಣಗಳಿಗೆ ಶಿಕ್ಷೆಯಾಗಿದೆ. 2020ರಲ್ಲಿ 3852 ಪ್ರಕರಣಗಳಲ್ಲಿ 2285 ಚಾರ್ಜ್ಶೀಟ್, 233 ಪ್ರಕರಣಗಳಿಗೆ ಶಿಕ್ಷೆಯಾಗಿವೆ. ಈವರೆಗೂ ಬೆಂಗಳೂರಿನಲ್ಲಿ ಮಾತ್ರ ಎಫ್ಎಸ್ಎಲ್ ಮಾತ್ರ ಇತ್ತು ಎಂದು ಹೇಳಿದ್ದಾರೆ.