ಬೆಂಗಳೂರು, ಆ. 14: ಕಂಠೀರವ ಕ್ರೀಡಾಂಗಣವನ್ನು ಗುಜರಾತ್ ಮಾದರಿಯ ಕ್ರೀಡಾಂಗಣದಂತೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕ್ರೀಡಾ ಸಚಿವ ನಾರಾಯಣಸ್ವಾಮಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು ಗುಜರಾತ್ ನ ಕ್ರೀಡಾಂಗಣ ಉತ್ತಮ ಗುಣಮಟ್ಟದಲ್ಲಿದೆ. ಕಂಠೀರವ ಕ್ರೀಡಾಂಗಣವನ್ನು ಕೂಡ ಆ ಮಾದರಿಯಲ್ಲೇ ಈ ಕ್ರೀಡಾಂಗಣವನ್ನು ಕೂಡ ಅಭಿವೃದ್ದಿಗೊಳಿಸಲಾಗುವುದು ಇದಕ್ಕಾಗಿ ಗುಜರಾತ್ ನ ಕ್ರೀಡಾಂಗಣ ವೀಕ್ಷಣೆಗಾಗಿ ನಿಯೋಗವೊಂದನ್ನು ಗುಜರಾತ್ ಗೆ ಕಳುಹಿಸಲಾಗುವುದು ಎಂದು ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ 4.50 ಕೋಟಿ ವೆಚ್ಚದಲ್ಲಿ ಚಿಕ್ಕಮಗಳೂರು ಮತ್ತು ಹಾಸನದಲ್ಲಿ ತಲಾ 7.50 ಕೋಟಿ ರುಪಾಯಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 5 ಕೋಟಿ ರು., ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು 10 ಕೋಟಿ ರು. ಮತ್ತು ಕೆ.ಆರ್.ಪೇಟೆ ತಾಲ್ಲೂಕು ಕ್ರೀಡಾಂಗಣವನ್ನು 14.50 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಅಥ್ಲೆಟಿಕ್ ಮತ್ತು ಈಜು ವಿಭಾಗದಲ್ಲಿ ಉಜ್ವಲ ಭವಿಷ್ಯ ಇದೆ. ಹೀಗಾಗಿ ಆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇರುವುದು ನಿಜ. ಖಾಲಿ ಹುದ್ದೆ ಶೀಘ್ರವೇ ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು. ಪ್ರತಿ ತಾಲೂಕಿನಲ್ಲಿಯೂ ಕ್ರೀಡಾಂಗಣ ಸ್ಥಾಪನೆಗೆ ಒತ್ತು ನೀಡಲಾಗಿದೆ. ಜೊತೆಗೆ ಪ್ಯಾರೀಸ್ನಲ್ಲಿ ನಡೆಯುವ 2024ರ ಒಲಂಪಿಕ್ಸ್ಗೆ ಕರ್ನಾಟಕದಿಂದ ಕನಿಷ್ಠ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಲಾಗಿದೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.