ನವದೆಹಲಿ, ಜೂ. 12: ಭಾರತ ಸ್ಪರ್ಧಾ ಆಯೋಗದ(ಸಿಸಿಐ) ತನಿಖೆ ಪ್ರಶ್ನಿಸಿ ಭಾರತದ ಬೃಹತ್ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಇಂದು ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಕಂಪನಿಗಳು ನಡೆಸುತ್ತಿರುವ ದುಷ್ಕೃತ್ಯಗಳ ವಿರುದ್ಧ ಧ್ವನಿ ಎತ್ತಲಿದೆ.
ಈ ಬಗ್ಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಈ ಕಾನ್ಫರೆನ್ಸ್ನಲ್ಲಿ ಎಲ್ಲಾ ರಾಜ್ಯಗಳ ಹಿರಿಯ ವ್ಯಾಪಾರ ಮುಖಂಡರು ಭಾಗವಹಿಸಬಹುದಾಗಿದೆ. ಜೂಮ್ ಆ್ಯಪ್ ಮೂಲಕ ಪ್ರೆಸ್ಮೀಟ್ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.
ಸ್ಪರ್ಧೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತ ಸ್ಪರ್ಧಾ ಆಯೋಗ ತನಿಖೆಗೆ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ರಿಟ್ ಅರ್ಜಿ ಸಲ್ಲಿಸಿದ್ದವು. ಆದರೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಈ ಅರ್ಜಿಯನ್ನು ವಜಾ ಮಾಡಿದೆ. ನ್ಯಾಯಮೂರ್ತಿ ದಿನೇಶ್ ಕುಮಾರ್ ಈ ಎರಡು ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ರಿಟ್ನಲ್ಲಿ ಅರ್ಜಿದಾರರು ಎತ್ತಿದ ಸಮಸ್ಯೆಗಳನ್ನು ಈ ಹಂತದಲ್ಲಿ ಪೂರ್ವಾಗ್ರಹ ಮಾಡುವುದು ಹಾಗೂ ತನಿಖೆಯನ್ನು ತಡೆಯುವುದು ಅವಿವೇಕದ ಸಂಗತಿಯಾಗಲಿದೆ ಎಂದು ಹೈಕೋರ್ಟ್ ಹೇಳಿದೆ.
2020ರ ಜನವರಿ 13ರಂದು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಉದ್ಯಮ ನಡೆಸುವ ರೀತಿಯು ಸರಿಯಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೆಚ್ಚಿನ ರಿಯಾಯಿತಿಗಳು ಹಾಗೂ ತಮ್ಮ ಫ್ಲಾಟ್ಪಾರ್ಮ್ನಲ್ಲಿ ಕೆಲವೇ ಮಾರಾಟಗಾರರ ಜೊತೆ ಕೈ ಜೋಡಿಸುತ್ತಿದೆ ಎಂದು ಸಿಸಿಐ ತನಿಖೆಗೆ ಆದೇಶಿಸಿತ್ತು.
ಸುಮಾರು 18 ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಾಲೀಕರನ್ನು ಪ್ರತಿನಿಧಿಸುವ ದೆಹಲಿ ವ್ಯಾಪಾರ್ ಮಹಾಸಂಘ್(ಡಿವಿಎಂ) ದೇಶದ ಇಬ್ಬರು ಅತೀ ದೊಡ್ಡ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ವಿರುದ್ಧ ದೂರು ಸಲ್ಲಿಸಿತ್ತು. ಸ್ಮಾರ್ಟ್ಫೋನ್ಗಳು ಹಾಗೂ ಸಂಬಂಧಿತ ಆಕ್ಸೆಸರಿಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿವಿಎಂ ಆರೋಪ ಮಾಡಿತ್ತು.
ಈ ದೂರಿನ ಆಧಾರದ ಮೇಲೆ ಸಿಸಿಐ 2020ರ ಜನವರಿಯಲ್ಲಿ ತನಿಖೆಗೆ ಆದೇಶಿಸಿತ್ತು. ಆದರೆ ಇ-ಕಾಮರ್ಸ್ ಕಂಪನಿಗಳು ಸಿಸಿಐ ತನಿಖೆ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದವು. ಈಗ ಕರ್ನಾಟಕ ಹೈ ಕೋರ್ಟ್ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸುವ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ದೇಶದ ಬೃಹತ್ ಇ-ಕಾಮರ್ಸ್ ಕಂಪನಿಗಳಿಗೆ ಹಿನ್ನಡೆಯಾಗಿದೆ.