ಬೆಂಗಳೂರು, ಮೇ. 08: ರಾಜ್ಯದಲ್ಲಿ ಕೊರೊನಾ ಸೋಂಕಿನ ಆತಂಕ ಉಲ್ಬಣಗೊಂಡ ಬೆನ್ನಲ್ಲೇ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಮೇ 10ರಿಂದ 24ರವರೆಗೆ 14 ದಿನಗಳ ಕಾಲ ಕಂಪ್ಲೀಟ್ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ಈ ಹಿಂದೆ ವಿಧಿಸಿದ್ದ ಜನತಾ
ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ಡೌನ್ ಮೊರೆ ಹೋಗಿದೆ. ಹೀಗಾಗಿ ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸುವ ಮೂಲಕ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರ ಕಟ್ಟಿನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಿದೆ.
14 ದಿನಗಳ ಕಾಲ ಲಾಕ್ಡೌನ್ ಹಿನ್ನೆಲೆಯಲ್ಲಿ ಟಫ್ ರೂಲ್ಸ್ ಜಾರಿಯಲ್ಲಿರಲಿದೆ. ಮೇ 10ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್ಡೌನ್ ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳು, ಬಾರ್ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಉಳಿದಂತೆ ರಸ್ತೆ ಕಾಮಗಾರಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಬಾರ್ಗಳಲ್ಲಿ ಪಾರ್ಸಲ್ಗೆ ಅವಕಾಶ ನೀಡಲಾಗಿದೆ. ಹೋಟೆಲ್ , ರೆಸ್ಟೋರೆಂಟ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅನುಮತಿ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್ ಶಾಪ್ಗಳು, ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲಾಗಿದ್ದು, ಕಾರ್ಮಿಕರು ಬೆಂಗಳೂರು ತೊರೆಯುವುದು ಬೇಡ ಎಂದು ಸಿಎಂ ಮನವಿ ಮಾಡಿದರು.
ಈಗಾಗಲೇ ಕೊರೋನಾ ಕರ್ಫ್ಯೂನಲ್ಲಿ ಜಾರಿಯಲ್ಲಿರುವ ಮೆಟ್ರೋ ಸಂಚಾರ ಬಂದ್, ಸರ್ಕಾರಿ-ಖಾಸಗಿ ಬಸ್ಗಳ ಸಂಚಾರಕ್ಕೆ ನಿರ್ಬಂಧ ಲಾಕ್ಡೌನ್ ವೇಳೆಯೂ ಮುಂದುವರೆಯಲಿದೆ. ಟ್ಯಾಕ್ಸಿ, ಆಟೋ ಸಂಚಾರ ಇರುವುದಿಲ್ಲ. ಮದುವೆ-ಸಮಾರಂಭಗಳು, ಅಂತ್ಯಸಂಸ್ಕಾರಗಳ ಮೇಲಿನ ನಿರ್ಬಂಧ ಎಂದಿನಂತೆ ಮುಂದುವರೆಯಲಿದೆ.