ಹಿಮಾಚಲ ಪ್ರದೇಶ, ಆ. 11: ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಭಾರೀ ಭೂಕುಸಿತ ಉಂಟಾಗಿದ್ದು, 40ಕ್ಕೂ ಹೆಚ್ಚು ಜನರು ಮಣ್ಣಿನಡಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಕಿಣ್ಣಾವುರ್ ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಇಂದು ಮಧ್ಯಾಹ್ನ 12.45ಕ್ಕೆ ಈ ಭೂಕುಸಿತ ಸಂಭವಿಸಿದ್ದು, ಕಿಣ್ಣಾವುರ್ ಜಿಲ್ಲಾಧಿಕಾರಿ ಅಬಿದ್ ಹುಸೇನ್ ಸಾದಿಖ್ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಹಿಮಾಚಲ ಪ್ರದೇಶದ ಸಾರಿಗೆ ಬಸ್ ಸಂಚರಿಸುತ್ತಿದ್ದಾಗಲೇ ಭೂಕುಸಿತ ಉಂಟಾಗಿದ್ದು, ಬಸ್ ಹಾಗೂ ಅದರ ಹಿಂದೆ ಮುಂದೆ ಬರುತ್ತಿದ್ದ ಕೆಲವು ವಾಹನಗಳು ಕೂಡ ಮಣ್ಣಿನಡಿ ಮುಚ್ಚಿಹೋಗಿವೆ. ಆ ಬಸ್ನಲ್ಲಿದ್ದ 40ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದಾರೆ.
ಹೆಚ್ಆರ್ಸಿಟಿಸಿ ಸಾರಿಗೆ ಬಸ್, ಟ್ರಕ್, ಕಾರುಗಳು ಭೂಕುಸಿತದಿಂದ ಮಣ್ಣಿನಡಿ ಮುಚ್ಚಿಹೋಗಿವೆ. ರೆಕಾಂಗ್ ಪಿಯೋ- ಶಿಮ್ಲಾ ಹೆದ್ದಾರಿ ಬಂದ್ ಆಗಿದ್ದು, ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.