ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಭೂ ಮಾಫಿಯಾದ ದೌರ್ಜನ್ಯದಿಂದ ರೋಸಿ ಹೋಗಿ ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಚಿಕ್ಕಬಳ್ಳಾಪುರ, ರಾಜಧಾನಿ ಬೆಂಗಳೂರಿಗೆ ನೆರೆಯ ಜಿಲ್ಲೆ. ಅಲ್ಲದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಕ್ಕದಲ್ಲೇ ಇರುವ ಜಿಲ್ಲೆಯಾಗಿರುವುದರಿಂದ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದುವೇ ಈಗ ರೈತರಿಗೆ ಶಾಪವಾಗಿ ಪರಿಣಮಿಸುತ್ತಿದೆ. ಕಾರಣ ಭೂಮಾಫಿಯಾದವರ ಅಬ್ಬರ. ಭೂಮಾಫಿಯಾ ಮಂದಿ ಬಡ ರೈತರ ಭೂಮಿ ಮೇಲೆ ಕಣ್ಣು ಹಾಕಿ, ಭ್ರಷ್ಟ ಕಂದಾಯ ಅಧಿಕಾರಿಗಳ ಜೊತೆ ಸೇರಿ, ನಕಲಿ ದಾಖಲೆ ಸೃಷ್ಟಿಸಿ ರೈತರ ಜಮೀನನ್ನು ಗುಳುಂ ಮಾಡುತ್ತಿದ್ದಾರೆ. ಇದು ಸ್ಥಳೀಯ ರೈತರಲ್ಲಿ ಆಕ್ರೋಶ ಮೂಡಿಸಿದೆ.
ಭೂಮಾಫಿಯಾದ ಕಾಟಕ್ಕೆ ಅನೇಕ ರೈತರು ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಕ್ರಮವಾಗಿ, ಕಾನೂನು ಬಾಹಿರವಾಗಿ ಜಮೀನು ದಾಖಲೆ ಸೃಷ್ಟಿಸಿ ಭಾರೀ ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಶ್ರೀನಿವಾಸಪುರ ಗ್ರಾ,ಮದ ಅಶೋಕ್ ಕುಮಾರ್ ಹಾಗೂ ಎಸ್.ಎಂ ನಾಗರಾಜ್ ಕುಟುಂಬವೇ ಸಾಕ್ಷಿ. ಇವರಿಗೆ ಭೂಮಾಫಿಯಾ ಕೊಡಬಾರದ ಕಾಟ ಕೊಡುತ್ತಿದೆ. ತಾವು ದಶಕಗಳಿಂದ ಉತ್ತು ಬಿತ್ತು ಉಣ್ಣುತ್ತಿದ್ದ ಜಮೀನನ್ನೇ ಅಕ್ರಮವಾಗಿ ಲಪಾಟಿಯಿಸಲು ಭಾರೀ ಹುನ್ನಾರ ಮಾಡಿದ್ದಾರೆ.
ಬುದ್ಧಿ ಭ್ರಮಣೆಯಾಗಿರುವ ವ್ಯಕ್ತಿಯ ಜಮೀನನ್ನು ಮೋಸದಿಂದ ಮಕ್ಕಳು ಇದ್ದರೂ ಸಹ ಅವರ ಸಹಿಯೂ ಪಡೆಯದೆ, ಅನುಮತಿಯನ್ನೂ ಪಡೆಯದೆ ತಮ್ಮ ಹೆಸರಿಗೆ ಕೆ.ಪಿ ರಮೇಶ್ ಅನ್ನೋ ವ್ಯಕ್ತಿ ಬರೆಸಿಕೊಂಡಿದ್ದಾರೆ ಅನ್ನೋದು ನೊಂದ ಕುಟುಂಬದ ಆರೋಪ. ಕೆ.ಪಿ ರಮೇಶ್ ಅನ್ನೋ ವ್ಯಕ್ತಿ ಅಧಿಕಾರಿಗಳ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಜಮೀನನ್ನು ಲಪಟಾಯಿಸಲು ಮುಂದಾಗಿದ್ದಾರೆ.
ಬಡವರು, ಅಸಹಾಯಕರ ಜಮೀನಿನ ಮೇಲೆ ಕಣ್ಣು ಹಾಕೋ ಭೂಮಾಫಿಯಾದವರು ಮೋಸದಿಂದ ಭೂಮಿಯನ್ನು ಗುಳುಂ ಮಾಡ್ತಿದ್ದಾರೆ. ಇದು ಇದು ಒಂದು ಕುಟುಂಬದ ಕತೆಯಲ್ಲ ಇಂಥಾ ಅನೇಕ ಕುಟುಂಬಗಳು ಈ ಜಿಲ್ಲೆಯಲ್ಲಿವೆ. ಈ ಬೆಳವಣಿಗೆಯನ್ನು ಖಂಡಿಸಿ ರೈತ ಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ರು. ಧರಣಿಗೆ ಮಣಿದ ತಹಶೀಲ್ದಾರ್ ದಿವಾಕರ್ ಅವರು ಸ್ಥಳಕ್ಕೆ ಆಗಮಿಸಿ ನಾಗಾರಾಜ್ ಕುಟುಂಬಕ್ಕೆ ನ್ಯಾಯ ಕೊಡುವ ಭರವಸೆ ನೀಡಿದ್ರು. ಅಲ್ಲದೆ ರೈತರಿಗೆ ಮೋಸ ಮಾಡುವ, ನಕಲಿ ದಾಖಲೆ ಸೃಷ್ಟಿಸಲು ಸಹಾಯ ಮಾಡುವ ಹಾಗೂ ರೈತರಿಂದ ಲಂಚ ಪಡೆಯುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ರು.
ತಹಶೀಲ್ದಾರ್ ಅವರು ಭರವಸೆ ನೀಡಿ ದಿನಗಳು ಉರುಳಿ ಹೋಗುತ್ತಿವೆ. ನಾಗರಾಜ್ ಅವರ ಬಡ ಕುಟುಂಬ ನ್ಯಾಯಕ್ಕಾಗಿ ನಿರಂತರವಾಗಿ ಕಚೇರಿಗಳನ್ನು ಸುತ್ತಾಡುತ್ತಿದೆ. ಆದ್ರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ತಹಶೀಲ್ದಾರರು ಈ ಬಗ್ಗೆ ಗಮನಹರಿಸಿ ನೊಂದ ರೈತರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ರೈತರು ಮನವಿ ಮಾಡುತ್ತಿದ್ದಾರೆ.