ಬೆಂಗಳೂರು,ಜೂ.17: ರಾಜ್ಯ ಬಿಜೆಪಿಯೊಳಗಿನ ಒಳಜಗಳದಿಂದ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದು, ಅರಾಜಕತೆ
ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯೆಪ್ರವೇಶಿಸಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಳೆದೆರಡು ದಿನಗಳಿಂದ ವಿಧಾನಸೌಧವೇ ಕೆ.ಕೆ. ಗೆಸ್ಟ್ಹೌಸ್ ಮತ್ತು ಬಿಜೆಪಿ ಕಚೇರಿಗೆ ಸ್ಥಳಾಂತರಗೊಂಡಂತೆ ಕಾಣುತ್ತಿದೆ. ಕಚೇರಿಯಲ್ಲಿ ಸಚಿವರಿಲ್ಲ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ. ಕೊರೊನಾ ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ, ಜನರ ಗೋಳನ್ನು ಕೇಳುವವರೇ ಇಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಕೋರೊನಾ ಸೋಂಕು/ಸಾವು, ಹಳ್ಳಿಗಳಿಗೂ ಹರಡುತ್ತಿರುವ ಸೋಂಕು, ಕೊರೊನಾ ಮೂರನೇ ಅಲೆ ಬೇಗನೇ ಬರುವ ತಜ್ಞರ ಭವಿಷ್ಯ, ಲಾಕ್ಡೌನ್ನಿಂದ ಹೆಚ್ಚುತ್ತಿರುವ ನಿರುದ್ಯೋಗ ಸವಾಲುಗಳನ್ನು ಎದುರಿಸಿ ಪರಿಹರಿಸಬೇಕಾದ ಸರ್ಕಾರವೇ ಐಸಿಯುನಲ್ಲಿದೆ ಎಂದು ಕಿಡಿಕಾರಿದ್ದಾರೆ.
ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆದು ಒಗ್ಗಟ್ಟಿನಿಂದ ಪ್ರಸಕ್ತ ವೈದ್ಯಕೀಯ ತುರ್ತುಪರಿಸ್ಥಿತಿ ಎದುರಿಸಿ ಜನತೆಯ ಹಿತಕಾಪಾಡಲು ಮುಂದಾಗಬೇಕಾಗಿದ್ದ ಮುಖ್ಯಮಂತ್ರಿಗಳು, ತಮ್ಮ ಪಕ್ಷದ ಶಾಸಕರು, ಸಚಿವರು ಮತ್ತು ಪಕ್ಷದ ಹೈಕಮಾಂಡ್ ನಾಯಕರ ಕೈಕಾಲು ಹಿಡಿದು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪರಸ್ಪರ ಕಚ್ಚಾಡುತ್ತಿರುವ ಬಿಜೆಪಿ ನಾಯಕರ ಕಿವಿಹಿಂಡಿ ಬುದ್ದಿ ಹೇಳಬೇಕಾದ ಬಿಜೆಪಿ ಹೈಕಮಾಂಡ್ ತೆರೆಮರೆಯಲ್ಲಿ
ರಾಜ್ಯದ ನಾಯಕರನ್ನು ಪರಸ್ಪರ ಎತ್ತಿಕಟ್ಟಿ ಕಳ್ಳಾಟ ಆಡುತ್ತಿದೆ.
ಬಿಜೆಪಿ ಹೈಕಮಾಂಡ್ಗೆ ಬೇಕಾಗಿರುವುದು ಸರ್ಕಾರದ ಸುಭದ್ರತೆಯೇ? ಅಥವಾ ಮುಖ್ಯಮಂತ್ರಿಗಳ ಅಭದ್ರತೆಯೇ? ಬೇಗ ನಿರ್ಧಾರ ಮಾಡಿಬಿಡಿ.
ನಗೆಪಾಟಲಿಗೀಡಾಗಿರುವ ಬಿಜೆಪಿ ಭಿನ್ನಮತವನ್ನು ನಿಯಂತ್ರಿಸಲಿಕ್ಕಾಗದ ನರೇಂದ್ರ ಮೋದಿ, ತಾವೊಬ್ಬ ದುರ್ಬಲ ನಾಯಕನೆಂದು ಸಾಬೀತುಪಡಿಸಿದ್ದಾರೆ. 56 ಇಂಚಿನ ಎದೆಯವನು ಎಂದು ಕೊಚ್ಚಿಕೊಳ್ಳುತ್ತಿರುವ ಮೋದಿಯವರು ಈಗಿನ ತನ್ನ ಎದೆ ಸುತ್ತಳತೆ ಎಷ್ಟಿದೆ ಎನ್ನುವುದನ್ನಾದರೂ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿ ಸರಣಿ ಟ್ವೀಟ್ ಮಾಡಿದ್ದಾರೆ.