ಅಹಮದಾಬಾದ್, ಮಾ. 12: ಆತ್ಮನಿರ್ಭರ ಭಾರತ ಮಹಾತ್ಮ ಗಾಂಧೀಜಿಯವರ ಕನಸಾಗಿದ್ದು, ಅದನ್ನು ಪೂರೈಸುವ ಮೂಲಕ ಬಾಪುಗೆ ಗೌರವ ಸಲ್ಲಿಸೋಣ. ಮಹಾತ್ಮ ಗಾಂಧೀಜಿಯ ದಂಡಿಯಾತ್ರೆ ದೇಶದ ಜನರನ್ನ ಒಗ್ಗೂಡಿಸಿದಂತೆಯೇ ಇಂದಿನಿಂದ ಆರಂಭವಾಗಲಿರುವ ಪಾದಯಾತ್ರೆ ನಮ್ಮಲ್ಲಿ ಐಕ್ಯತೆಯ ಭಾವ ಮೂಡಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಗುಜರಾತ್ನ ಅಹಮದಾಬಾದ್ನಲ್ಲಿನ ಸಾಬರಮತಿ (SABARAMATI) ಆಶ್ರಮದಿಂದ ಆರಂಭಗೊಳ್ಳಲಿರುವ 23 ದಿನಗಳ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ಮಹಾತ್ಮ ಗಾಂಧೀಜಿಯವರ ಕೊಡುಗೆಗಳನ್ನು ಸ್ಮರಿಸಿಕೊಂಡರು. 81 ಸ್ವಯಂ ಸೇವಕರ ಕೈಗೊಳ್ಳಲಿರುವ 386 ಕಿಲೋಮೀಟರ್ ಪಾದಯಾತ್ರೆ ಏಪ್ರಿಲ್ 6ರಂದು ದಂಡಿ ತಲುಪಲಿದೆ.
ಮುಂದಿನ ವರ್ಷ ಸ್ವಾತಂತ್ರ್ಯ ದೊರೆತು 75 ವರ್ಷವಾಗಲಿದೆ. ಈ ಸಂದರ್ಭ ದೇಶಕ್ಕೆ ಗೌರವದಾಯಕ, ಐತಿಹಾಸಿಕ ಸಮಯವಾಗಿದ್ದು, ಇಂದಿನಿಂದ ಚರಕ ಅಭಿಯಾನವನ್ನೂ ಆರಂಭಿಸಲಾಗಿದೆ. 2023ರವರೆಗೂ ಅಮೃತ ಮಹೋತ್ಸವ ಕಾರ್ಯಕ್ರಮ ದೇಶಾದ್ಯಂತ ಜರುಗಲಿದ್ದು, ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ನಾನು ನಮಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ಸ್ವಾತಂತ್ರ್ಯ ಹೋರಾಟ ಬಗ್ಗೆ ಜನತೆ ಅರಿತುಕೊಳ್ಳಬೇಕಿದೆ. 75ನೇ ಸ್ವಾತಂತ್ರ್ಯೋತ್ಸವ ಒಂದು ಐತಿಹಾಸಿಕ ಉತ್ಸವವಾಗಿದ್ದು, 75ನೇ ಸ್ವಾತಂತ್ರ್ಯೋತ್ಸವವನ್ನು ನಾವೆಲ್ಲರೂ ಸಂಭ್ರಮಿಸಬೇಕು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಘೋಷಿಸಿದ್ದ ‘ದೆಲ್ಲಿ ಚಲೋ’, ‘ಕ್ವಿಟ್ ಇಂಡಿಯಾ’ ( ಭಾರತ ಬಿಟ್ಟು ತೊಲಗಿ), ‘ಪೂರ್ಣ ಸ್ವರಾಜ್ಯ’ದಂತಹ ಘೋಷಣೆಗಳನ್ನು ನಾವೆಂದಿಗೂ ಮರೆಯಬಾರದು ಎಂದು ಪ್ರಧಾನಿಗಳು ತಿಳಿಸಿದರು.