ಚಿಕ್ಕಮಗಳೂರು, ಮೇ. 19: ಮಲೆನಾಡಿನ ಲಕ್ಷಾಂತರ ಜನರ ಮನೆ ಮನೆ ಮಾತಾಗಿದ್ದ ಕೊಪ್ಪ ಮೂಲದ ಸಹಕಾರ ಸಾರಿಗೆ (T.C.S) ಸಂಸ್ಥೆಗೆ ಬೀಗ ಬಿದ್ದಿದೆ.
ಸಹಕಾರ ಸಾರಿಗೆ ಸಂಸ್ಥೆಯ ಆಡಳಿತ ವರ್ಗ ಸಾಲವನ್ನು ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯೂ 1 ಎಕರೆ 10 ಗುಂಟೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಸಂಸ್ಥೆಯ ಅಧ್ಯಕ್ಷರಾದ ಈ.ಎಸ್ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಗಾಡ್ವಿನ್ ಜಯಪ್ರಕಾಶ್ ಅವರು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ಕೋಟಿಯ 20 ಲಕ್ಷ ಸಾಲವನ್ನು ಪಡೆದಿದ್ದರು.
2019ರ ನಂತರ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ. ಕಂಪನಿಯೂ ಅವರಿಗೆ ನೋಟಿಸ್ ನೀಡಿದ್ದರು ಸಹ ಬಡ್ಡಿ ಸಹಿತ 1,31,41,210 ರೂ.ಮೊತ್ತವನ್ನು ಮರು ಪಾವತಿ ಮಾಡಲು ಹಿಂದೇಟು ಹಾಕಿದ್ದ ಕಾರಣ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಆದೇಶದ್ವಯ ಸೋಮವಾರ ತಾಲೂಕು ದಂಡಾಧಿಕಾರಿ ಹೆಚ್.ಎಸ್ ಪರಮೇಶ್ ಸಮ್ಮುಖದಲ್ಲಿ ಕೆಸವೆ ರಸ್ತೆಯ ಸರ್ವೆ ನಂ 97ರಲ್ಲಿರುವ 1 ಎಕರೆ 10 ಗುಂಟೆ ಟಿಸಿಎಸ್ ಸಂಸ್ಥೆಯ ಆಸ್ತಿತಿಯನ್ನು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿ ವಶಕ್ಕೆ ತೆಗೆದುಕೊಂಡಿದೆ. ಯಾರೂ ಕಛೇರಿಗೆ ಪ್ರವೇಶಿಸದಂತೆ ಬೀಗಮುದ್ರೆ ಹಾಕಲಾಗಿದೆ.
ಏನಿದು ಕೇಸ್..?: ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯ ಮ್ಯಾನೇಜರ್ ಸಂತೃಪ್ತ್ ಮಾತನಾಡಿ, 2019ರ ನಂತರ ಸಂಸ್ಥೆಯೂ ಸಾಲವನ್ನು ಪಾವತಿ ಮಾಡಿಲ್ಲ. ನಾವು ಹಲವು ಭಾರಿ ನೋಟಿಸ್ ನೀಡಿದ್ದೇವೆ. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿ ಮುಟ್ಟುಗೋಲು ಹಾಕಿಕೊಳ್ಳು ಆದೇಶ ಮಾಡಿದ್ದಾರೆ. ಆದರಂತೆ ತಾಲೂಕು ಮ್ಯಾಜಿಸ್ಟ್ರೇಟ್ ವಶಕ್ಕೆ ಪಡೆದು ನಮಗೆ ಹಸ್ತಾಂತರ ಮಾಡಿದ್ದಾರೆ. ನಂತರದಲ್ಲಿ ಹರಾಜು ಹಾಕಲಾಗುತ್ತದೆ ಎಂದು ತಿಳಿಸಿದರು.ತಹಸೀಲ್ದಾರ್ ಪರಮೇಶ್, ರಾಜಸ್ವ ನಿರೀಕ್ಷಕ ಸತೀಶ್, ವೃತ್ತ ನಿರೀಕ್ಷಕ ಗುರಣ್ಣಾ ಹೆಬ್ಬಾಳ್, ಪಿಎಸ್ಐ ರವಿ ಮುಂತಾದವರಿದ್ದರು..
ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಹಕಾರ ಸಾರಿಗೆ ಅವರ ಮನೆಯ ಬಸ್ಸಿನಂತೆ ಸೇವೆ ನೀಡಿತ್ತು. ಹಳ್ಳಿಗಾಡಿನ ಜನರಿಗೆ ಸೇವೆ ನೀಡಿದ್ದೆ ಕಂಪನಿಗೆ ಮುಳುವಾಗಿದೆ. ಜೊತೆಗೆ ಆಡಳಿತ ವ್ಯವಸ್ಥೆಯ ದುರುಪಯೋಗವೂ ಕಾರಣ ಎನ್ನಲಾಗಿದೆ.