ಬೆಂಗಳೂರು, ಜ. 21: ರಾಜಭವನ ಚಲೋ ವೇಳೆ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕರ್ತವ್ಯನಿರತ ಮಹಿಳಾ ಪೇದೆಯ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿರುವ ಸಚಿವ ಶ್ರೀರಾಮುಲು, ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ, ಜನಪರತೆ ಎಂಬುದು ಬಾಯಿಮಾತಿಗಷ್ಟೇ ಸೀಮಿತವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಪ್ರಜಾಪ್ರಭುತ್ವ, ಜನಪರತೆ ಎಂಬುದು ಬಾಯಿಮಾತಿಗಷ್ಟೇ ಸೀಮಿತವಾಗಿದ್ದು, ಪ್ರತಿಭಟನೆ ಹೆಸರಿನಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕೂಡಲೇ ಅವರು ಮಹಿಳಾ ಪೊಲೀಸರ ಕ್ಷಮೆಯಾಚಿಸಬೇಕು.
ಪ್ರತಿಭಟನೆ ಇರುವುದು ಸರ್ಕಾರದ ವಿರುದ್ಧ. ಆದರೆ ಮಹಿಳಾ ಪೇದೆಗಳ ಮೇಲೇಕೆ ದರ್ಪ ತೋರಿಸುತ್ತೀರಿ ಸೌಮ್ಯಾ ರೆಡ್ಡಿ ಅವರೇ, ಒಬ್ಬ ಯುವ ನಾಯಕ ಸ್ನೇಹಿತನ ಮೇಲೇ ಹಲ್ಲೆ ಮಾಡಿದರೆ ಇಲ್ಲೊಬ್ಬ ಯುವ ನಾಯಕಿ ಪೊಲೀಸರ ಮೇಲೆ ಹಲ್ಲೆ. ಹಲ್ಲೆ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿಯೇ? ಜನತೆಗೆ ನಿಮ್ಮಂತೆ ಬಾಳುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಶಾಸಕಿಯಾಗಿ, ಹೆಣ್ಣುಮಗಳಾಗಿ, ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಬೇಕು. ಅದು ಬಿಟ್ಟು ಇನ್ನೊಬ್ಬ ಹೆಣ್ಣುಮಗಳ ಮೇಲೆ ಕೈ ಮಾಡುವುದು ಸರಿಯೇ? ಸೌಮ್ಯಾ ರೆಡ್ಡಿ ಅವರೇ, ದುಡಿದು ಬಾಳುವುದು ಮಹಿಳಾ ಸಬಲೀಕರಣವೋ? ಹೊಡೆದು ಬಾಳುವುದೋ? ಎಂದಿದ್ದಾರೆ.