ಕೊಲ್ಕತ್ತಾ, ಏ. 12: ಮಮತಾ ಬ್ಯಾನರ್ಜಿ ಅವರನ್ನು ಕ್ಲೀನ್ ಬೌಲ್ಡ್ ಮಾಡಲಾಗಿದೆ. ಅವರ ಇಡೀ ತಂಡ ಮೈದಾನದಿಂದ ಹೊರ ಹೋಗಬೇಕೇಂದು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ, ಟಿಎಂಸಿ ನಾಯಕಿಯನ್ನು ಮತ್ತೊಮ್ಮೆ ಟೀಕಿಸಿದ ಪ್ರಧಾನಿ ಮೋದಿ, ಹಿಂದಿನ ಶೈಲಿಯಲ್ಲಿ ದೀದಿ ಓ ದೀದಿ ಎಂದು ಕರೆಯುವ ಮೂಲಕ ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ದೀದಿ.. ನೀವು ಕೋಪ ಹೊರಹಾಕಬೇಕೆಂದರೆ, ನಾನು ಇಲ್ಲೇ ಇದ್ದೇನೆ. ನನ್ನನ್ನು ದೂಷಿಸಿ. ಆದರೆ, ಬಂಗಾಳದ ಘನತೆ ಮತ್ತು ಸಂಪ್ರದಾಯವನ್ನು ಅವಮಾನಿಸಬೇಡಿ. ಬಂಗಾಳದ ಜನರು ನಿಮ್ಮ ದುರಹಂಕಾರ, ಸುಲಿಗೆಯನ್ನು ಸಹಿಸುವುದಿಲ್ಲ. ಏಕೆಂದರೆ ಜನರು ನಿಜವಾಗಿಯೂ ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಪಶ್ಚಿಮ ಬಂಗಾಳದ ಬರ್ಧಮಾನ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಟಿಎಂಸಿ ಧ್ಯೇಯವಾಕ್ಯವಾದ ‘ಮಾ, ಮಾತಿ ಮನುಷ್ಯ’ (ತಾಯಿ, ತಾಯ್ನಾಡು ಮತ್ತು ಜನರು) ಹಿಡಿದು ಪಕ್ಷ ಟೀಕಿಸಿದ ಅವರು, ಮಾ ಎಂದರೆ ಹಿಂಸೆ ನೀಡುವುದು, ಮಾತಿ ಎಂದರೆ ಲೂಟಿ ಮಾಡುವುದು ಮನುಷ್ಯ್ ಎಂದರೆ ರಕ್ತಪಾತ ಎಂದು ವಾಗ್ದಾಳಿ ನಡೆಸಿದರು.
ನಾಲ್ಕು ಹಂತದ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ನಾಲ್ಕು, ಆರು ರನ್ ಬಾರಿಸುವ ಮೂಲಕ ಸೆಂಚುರಿ ಬಾರಿಸಿದೆ. ಅರ್ಧ ಮ್ಯಾಚ್ನಲ್ಲಿಯೇ ಟಿಎಂಸಿಯನ್ನು ಸೋಲಿಸಿದೆ. ನಂದಿಗ್ರಾಮದಲ್ಲಿ ಬಂಗಾಳದ ಜನರು ದೀದಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದು, ಅವರ ಸಂಪೂರ್ಣ ತಂಡವನ್ನು ಮೈದಾನ ಬಿಟ್ಟು ಹೊರನಡೆಯುವಂತೆ ಆದೇಶಿಸಿದ್ದಾರೆ ಎಂದರು.