ಮಂಗಳೂರು, ಜ. 05: ಕೊರೋನಾ ಕಾರಣದಿಂದಾಗಿ ಈಗಾಗಲೇ ಜನರು ಅನೇಕ ಸಂಕಷ್ಟಗಳಿಗೆ ತುತ್ತಾಗಿದ್ದಾರೆ. ಆದರೆ ಸರ್ಕಾರಿ ಕೆಲಸದಲ್ಲಿದ್ದೂ, ತಿಂಗಳ ಸಂಬಳ ಪಡೆದರೂ, ಸಾಲದೆ ಲಂಚಕ್ಕೆ ಕೈಯೊಡ್ಡುವವರಿಗೆನೂ ಕಡಿಮೆ ಇಲ್ಲ. ಮಂಗಳೂರು ತಹಶೀಲ್ದಾರ್ ಕಚೇರಿಗೆ ಇಂದು ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಎಸ್ಡಿಎ ರಫೀಕ್ ಅಬ್ದುಲ್ (42) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಕೆಲಸವೊಂದನ್ನು ಮಾಡಿ ಕೊಡಲು ರೂ. 40 ಸಾವಿರ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಮೇಲಿತ್ತು. ಇದೇ ಕಾರಣಕ್ಕೆ ಎಸಿಬಿ ಕಚೇರಿಯಲ್ಲಿ ದೂರು ದಾಖಲಿಸಿದ್ದ ಸಂತ್ರಸ್ತರು, ಆರೋಪಿಗೆ ನಗದು ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಎಸಿಬಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಿ, ಲಂಚದ ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲಸವಿಲ್ಲದೆ ಜನ ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ ಹಣದ ದುರಾಸೆಗೆ ಬಿದ್ದು ಬಂಧಿತರಾಗಿದ್ದಾರೆ ಎಂದು ತಿಳಿದು ಬಂದಿದೆ.