ಬೆಂಗಳೂರು, ಫೆ. 09: ಸಿಲಿಕಾನ್ ಸಿಟಿ ಜನರೇ ನಾಳೆ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿಯಲ್ಲಿ ಓಡಾಡೋ ಪರಿಸ್ಥಿತಿ ಇದ್ರೆ ಅದನ್ನ ಸ್ವಂತ ವಾಹನಕ್ಕೆ ಬದಲಾಯಿಸಿಕೊಳ್ಳಿ. ಯಾಕಂದ್ರೆ ನಾಳೆ ಸಾರಿಗೆ ನೌಕರರು ಪ್ರತಿಭಟನೆಗಾಗಿ ರಸ್ತೆಗಿಳಿಯಲಿದ್ದು ಮತ್ತೊಮ್ಮೆ ಬೆಂಗಳೂರಿಗರಿಗೆ ಪ್ರತಿಭಟನೆಯ ಬಿಸಿ ತಟ್ಟಲಿದೆ.
ಸರಿಯಾದ ಸಮಯಕ್ಕೆ ಸಂಬಳ ನೀಡಬೇಕೆಂಬ ಮುಖ್ಯ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಶಾಂತಿ ನಗರದ ಬಿಎಂಟಿಸಿ ಕಚೇರಿ ಮುಂದೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆ ನಡೆಸಲಿದ್ದು ಸಾರಿಗೆ ನಿಗಮಗಳ ಆಡಳಿತ ವರ್ಗ ಹಾಗೂ ಸರ್ಕಾರದ ವಿರುದ್ದ ಸಾರಿಗೆ ನೌಕರರು ರಸ್ತೆಗಿಳಿಯಲಿದ್ದಾರೆ.
ಇನ್ನೂ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್ ಖರೀದಿ ಮಾಡುವ ಮೂಲಕ ಖಾಸಗಿಕರಣಕ್ಕೆ ಮುಂದಾಗುತ್ತಿದ್ದು , ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಖಾಸಗಿಕರಣ ಆಗಲಿದೆ , ಸರ್ಕಾರ ಅದಾಯದ ಮೂಲವನ್ನ ಹೆಚ್ಚು ಮಾಡಿ ನೌಕರರ ಸಮಸ್ಯೆ ಬಗೆಹರಿಸಬೇಕು ಎಂಬುದು ಕೂಡ ನೌಕರರ ಒತ್ತಾಯವಾಗಿದೆ.
ಕೊರೊನಾ ಬಂದಾಗಿಂದ ಸಾರಿಗೆ ನೌಕರರಿಗೆ ಹಲವು ಸಮಸ್ಯೆ ಎದುರಾಗಿದ್ದು ನಿಗಮಗಳ ಅಡಳಿತ ಹಾಗೂ ಸರ್ಕಾರದ ವಿರುದ್ದ ಸಾರಿಗೆ ನೌಕರರರು ಮತ್ತೆ ರೋಡಿಗಿಳಿಯಲಿದ್ದು ಈ ಬಾರಿಯಾದ್ರೂ ಬೇಡಿಕೆ ಈಡೇರುತ್ತಾ ಅನ್ನೊದನ್ನು ಕಾದು ನೋಡಬೇಕಾಗಿದೆ.
ಸಾರಿಗೆ ನೌಕರರ ಬೇಡಿಕೆಗಳೇನು?
- ಸರಿಯಾದ ಸಮಯಕ್ಕೆ ಪೂರ್ತಿ ಸಂಬಳ ಕೊಡಬೇಕು
- ಕೋವಿಡ್ ನಿಂದ ಮೃತಪಟ್ಟ ನೌಕರರಿಗೆ ಘೋಷಣೆಯಾಗಿರುವ 30 ಲಕ್ಷ ಪರಿಹಾರ ಕೂಡಲೇ ನೀಡಬೇಕು
- ವಾರದ ರಜೆ ಜೊತೆಗೆ ನೌಕರರ ಅಕೌಂಟ್ ನಲ್ಲಿರುವ ರಜೆಗಳಿಗೆ ಹಾಜರಾತಿ ನೀಡಬೇಕು
- ಪೂರ್ಣ ಪ್ರಮಾಣದಲ್ಲಿ ಮಾರ್ಗ ಆರಂಭಿಸಿ, ನಾಲ್ಕು ಪಾಳಿಗಳಲ್ಲಿ ಕೆಲಸ ನೀಡಬೇಕು
- ಮಹಿಳಾ ಕಾರ್ಮಿಕರಿಗೆ ಮೊದಲಿನ ಹಾಗೆ ಸಾಮಾನ್ಯ ಪಾಳಿಯಲ್ಲಿ ಕೆಲಸ ನೀಡಬೇಕು
- ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಮಿತಿ ರಚನೆ ಮಾಡಬೇಕು
- ಗುತ್ತಿಗೆ ಆಧಾರದ 300 ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಯನ್ನ ನಿಲ್ಲಿಸಬೇಕು. ಎಂದು ಏಳು ಬೇಡಿಕೆಗಳನ್ನು ಈಡೇರಿಸುವಂತೆ ನಾಳೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.