ಬೆಂಗಳೂರು:ಖಾತೆ ಹಂಚಿಕೆ ಅಸಮಾಧಾನದ ಬಿಸಿ ತಣ್ಣಗಾಗುವ ಮೊದಲೇ, ಇದೀಗ ಸಿಎಂ ಯಡಿಯೂರಪ್ಪ ಇಂದೂ ಎರಡು ಖಾತೆಗಳನ್ನು ಅದಲು ಬದಲು ಮಾಡಿದ್ದಾರೆ.
ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಸಚಿವ ಆನಂದ್ ಸಿಂಗ್ ಗೆ ಮೂಲ ಸೌಕರ್ಯ ಖಾತೆ ಹೊಣೆಯನ್ನು ಹೊರಿಸಲಾಗಿದೆ.
ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದಂತ ಸಿಎಂ ಯಡಿಯೂರಪ್ಪ ಪುನಃ ಸಚಿವರ ಅಸಮಾಧಾನ ಸರಿಪಡಿಸಲು ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ, ಸುಧಾಕರ್ ಅವರಿಗೆ ನೀಡಿದ್ದಾರೆ. ಈ ಮೂಲಕ ಸಚಿವ ಸುಧಾಕರ್ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನಿರ್ವಹಿಸಲಿದ್ದಾರೆ.
ಸಚಿವ ಜೆ ಸಿ ಮಾಧುಸ್ವಾಮಿ ಬಳಿಯಿದ್ದಂತಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿ, ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿತ್ತು.
ಆದರೆ ನಾನು ಗ್ರಾಮೀಣ ಭಾಗದಿಂದ ಬಂದವನು, ವೈದ್ಯಕೀಯ ಶಿಕ್ಷಣ ಖಾತೆಯಿಂದ ಏನು ಜನರ ಕೆಲಸ ಮಾಡಲಿ ಎಂದು ಮಾಧುಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ನಡುವೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಲ್ಲೇ ಇರಲಿ ಎನ್ನುವ ಕಾರಣಕ್ಕಾಗಿ, ಸಚಿವ ಡಾ.ಕೆ.ಸುಧಾಕರ್ ಬಳಿಯಲ್ಲಿಯೇ ಇದ್ದಂತ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಅವರಿಗೆ ನೀಡಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕಾಗಿ 2 ಖಾತೆಗಳ ಹೊಣೆಗಾರಿಕೆ ನೀಡಲಾಗಿದೆ.
ಸಚಿವ ಆನಂದ್ ಸಿಂಗ್ ಖಾತೆಯನ್ನು ಕೂಡ ಅದಲು ಬದಲು ಮಾಡಲಾಗಿದೆ. ಅವರಿಗೆ ಸಿಎಂ ಯಡಿಯೂರಪ್ಪ ಬಳಿಯಲ್ಲಿದ್ದಂತ ಮೂಲ ಸೌಖರ್ಯ ಖಾತೆ ಜೊತೆಗೆ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ.