ಬೆಂಗಳೂರು, ಏ. 19: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮ ಜಾರಿಗೊಳಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಮಾಧುಸ್ವಾಮಿ ಲಾಕ್ಡೌನ್ ನಿರ್ಧಾರವನ್ನು ತಳ್ಳಿಹಾಕಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ನೈಟ್ ಕರ್ಫ್ಯೂ ಮಾಡಬೇಕು ಎಂಬ ಚರ್ಚೆ ಇತ್ತು. ಅಲ್ಲದೇ ನಮ್ಮ ನಿರೀಕ್ಷೆ ಮೀರಿ ಬೆಂಗಳೂರಿನಲ್ಲಿ ಎಫೆಕ್ಟ್ ಆಗ್ತಿದೆ. ಜೀವನ, ಜೀವ ಎರಡೂ ನೋಡಬೇಕಿದೆ. ಈ ನಿಟ್ಟಿನಲ್ಲಿ ಲಾಕ್ಡೌನ್ ಮಾಡಿದ್ರೆ ಅಪಾರ ನಷ್ಟ ಆಗಲಿದೆ. ಕಳೆದ ಬಾರಿಯೇ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದರು.
ಕಸುಬುದಾರರಿಗೆ ಕೆಲಸ ನಿಲ್ಲಿಸಿ ಅಂದ್ರೆ ಅವರಿಗೆ ಪರಿಹಾರ ಕೊಡಬೇಕು. ಇಂಡಸ್ಟ್ರಿ, ಆಟೋ ಡ್ರೈವರ್ ಕೆಲಸ ನಿಲ್ಲಿಸಿದ್ರೆ ತುಂಬಾ ತೊಂದರೆಯಾಗುತ್ತೆ. ಇದೆಲ್ಲಾ ಯೋಚಿಸಿ ನಿರ್ಧಾರ ಮಾಡಬೇಕಿದೆ ಎಂದ ಅವರು, ಆ ಮೂಲಕ ಲಾಕ್ಡೌನ್ ನಿರ್ಧಾರ ತಳ್ಳಿ ಹಾಕಿದರು ಸಚಿವ ಮಾಧುಸ್ವಾಮಿ,
ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಇರುವ 50 ಬೆಡ್ ಕೊಟ್ಟಿದ್ದೇವೆ. ಜಿಲ್ಲಾಮಟ್ಟದಲ್ಲಿ 200ರಿಂದ 400 ಬೆಡ್ ಇದೆ. ಎಲ್ಲಾ ತಾಲೂಕುಗಳಲ್ಲಿ ತಲಾ 5ರಿಂದ 6 ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೇವೆ ಎಂಬ ತಿಳಿಸಿದರು.