ಚಿಕ್ಕೋಡಿ, ಜು. 06: ನನ್ನ ಕಾರು ಅಪಘಾತಕ್ಕೀಡಾದ ವೇಳೆ ನಾನು ಆ ಕಾರಿನಲ್ಲಿಯೇ ಇರಲಿಲ್ಲ. ದೇವರಾಣೆ ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲ ಸುಳ್ಳು… ಎಂದು ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹೇಳಿದ್ದಾರೆ.
ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಚಿದಾನಂದ ಸವದಿ ಮಾಲೀಕತ್ವದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ವೇಳೆ ಕಾರಿನಲ್ಲಿ ಚಿದಾನಂದ ಸವದಿ ಇದ್ದರು. ಆದರೂ ತಾನು ಇರಲೇ ಇಲ್ಲ ಎಂದು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಚಿದಾನಂದ ಸವದಿ, ಅಪಘಾತವಾದ ಕಾರಿನಲ್ಲಿ ಸ್ನೇಹಿತರಿನಾನು ಮತ್ತು ನಮ್ಮ ಸ್ನೇಹಿತರು ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಹೋಗಿದ್ವಿ. ನನ್ನ ಕಾರಿನಲ್ಲಿ ನನ್ನ ಸ್ನೇಹಿತರು ಮತ್ತು ಡ್ರೈವರ್ ಬರುವ ಸಮಯದಲ್ಲಿ ಅಪಘಾತವಾಗಿದೆ. ನಾನಿದ್ದ ಕಾರಿಗೂ ಮತ್ತು ಅಪಘಾತವಾದ ಕಾರಿಗೂ 3೦ಕಿಮೀ ಅಂತರವಿತ್ತು. ಡ್ರೈವರ್ ನನಗೆ ಫೋನ್ ಮಾಡಿ ಅಪಘಾತವಾದ ಬಗ್ಗೆ ಮಾಹಿತಿ ನೀಡಿದ. ಕೂಡಲೇ ನಾನು ಫೋನ್ ಮಾಡಿ ಆಂಬುಲೆನ್ಸ್ ತರಿಸಿ ಬಾಗಲಕೋಟೆ ಎಸ್ಪಿ, ಡಿವೈಎಸ್ಪಿ, ಸಿಪಿಐಗೆ ಮಾಹಿತಿ ನೀಡಿದೆ. ನಾನು ರಿಟರ್ನ್ ಬರುವಷ್ಟರಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದರು.
ಅಪಘಾತ ಎಲ್ಲಿ ನಡೆಯಿತು?: ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿದಂತೆ 12 ಜನರು ಎರಡು ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಬರುವ ವೇಳೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಾರು ಬೈಕ್ಗೆ ಡಿಕ್ಕಿಯಾಗಿದೆ. ಬೈಕ್ ಸವಾರ ಕೊಡ್ಲೆಪ್ಪ ಬೋಳಿ ಮೃತಪಟ್ಟಿದ್ದಾನೆ.
ಬೈಕ್ ಸವಾರ ಸಡನ್ ಆಗಿ ಬಂದಿದ್ದರಿಂದ ಕಾರು ನಿಯಂತ್ರಣಕ್ಕೆ ಬಾರದೆ ಅಪಘಾತ ಸಂಭವಿಸಿದೆ. ಅಪಘಾತವಾದ ವ್ಯಕ್ತಿಯನ್ನು ಭೇಟಿ ಮಾಡಬೇಕೆಂದು ನಾನು ಆಸ್ಪತ್ರೆಯತ್ತ ಹೋಗುವಷ್ಟರಲ್ಲಿ ‘ಅವರು ಡೆತ್ ಆದರು’ ಎಂದು ಫೋನ್ ಬಂತು. ಆಸ್ಪತ್ರೆಗೆ ಹೋದಾಗ ಅವರ ಕುಟುಂಬಸ್ಥರು ಯಾರೂ ಅಲ್ಲಿ ಇರಲಿಲ್ಲ. ಹೀಗಾಗಿ ಅವರನ್ನು ನಾನು ಭೇಟಿ ಮಾಡಲಾಗಲಿಲ್ಲ ಎಂದರು.
ಕಳೆದ 10 ವರ್ಷದಿಂದ ನಾನು ಡ್ರೈವಿಂಗ್ ಮಾಡುತ್ತಿಲ್ಲ. ನನ್ನ ಡ್ರೈವರ್ ಡ್ರೈವ್ ಮಾಡ್ತಾನೆ. ಅಪಘಾತ ನಡೆದ ಸ್ಥಳದಲ್ಲಿ ನಾನು ಯಾವ ಸ್ಥಳೀಯರೊಂದಿಗೂ ಮಾತನಾಡಿದಲ್ಲ. ನಾನು ಡಿಸಿಎಂ ಮಗ ಅಂತ ಯಾರಿಗೂ ಹೇಳಿಲ್ಲ. ಅಪಘಾತಕ್ಕೀಡಾದ ವ್ಯಕ್ತಿಯನ್ನ ಆಸ್ಪತ್ರಗೆ ಕಳಿಸಿದ್ದೂ ನಾವೇ ಎಂದ ಚಿದಾನಂದ ಸವದಿ, ಅವರ ಅಂತ್ಯ ಸಂಸ್ಕಾರದ ಬಳಿಕ ಕುಟುಂಬಸ್ಥರನ್ನು ಭೇಟಿ ಮಾಡುವೆ. ಅವರ ನಿಧನದ ದುಃಖವನ್ನ ಸಹಿಸುವ ಶಕ್ತಿ ಭಗವಂತ ಕುಟುಂಬಸ್ಥರಿಗೆ ನೀಡಲಿ. ನಮಗೂ ಈ ದುರ್ಘಟನೆಯಿಂದ ದುಖವಾಗಿದೆ. ಇಂತಹ ಘಟನೆ ಆಗಬಾರದಿತ್ತು. ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.