ನವದೆಹಲಿ, ಆ. 08: ವಿರೋಧ ಪಕ್ಷದ ನಾಯಕರುಗಳ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ತೆರಳಿದರು. ಅವರ ಜೊತೆ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆಯ ಸಂಜಯ್ ರಾವತ್, ಡಿ ಎಂ ಕೆಯ ಟಿ ಸಿವ, ಇನ್ನಿತರರೂ ಭಾಗಿಯಾದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, “ಕೇಂದ್ರದ ಉದ್ದೇಶ ಕಾಲೇಜು ಯುನಿವರ್ಸಿಟಿಗಳಲ್ಲಿ ವಿದ್ಯಾರ್ಥಿಗಳ ದನಿಯನ್ನು ಹತ್ತಿಕ್ಕುವುದು, ದೇಶದ ದನಿಯನ್ನು ಹತ್ತಿಕ್ಕುವುದು. ಯುವಕರು ದನಿಯೆತ್ತಿದಾಗ ನರೇಂದ್ರ ಮೋದಿ ಸರಕಾರ ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ಪೆಗಾಸಸ್ ನಂತಹ ಚಿಕ್ಕ ವಿಚಾರಕ್ಕೆ ಯಾಕೆ ಕಾಂಗ್ರೆಸ್ ಇಷ್ಟೊಂದು ಮಾತನಾಡುತ್ತಿದೆಯೆಂದು ಕೆಲವರು ಪ್ರಶ್ನಿಸಿದರು. ಆದರೆ ಇದು ಮಾಮೂಲಿ ವಿಚಾರವಲ್ಲ, ಮೋದಿ ಎಲ್ಲರ ಫೋನ್ ನಲ್ಲೂ ಪೆಗಾಸಸ್ ಬಿಟ್ಟಿದ್ದಾರೆ. ಇದು ನಮ್ಮೆಲ್ಲರ ಮಾತುಗಳನ್ನು ದಮನಿಸುವ ಪ್ರಯತ್ನ. ಕೇವಲ ತಮ್ಮ ಬೆರಳೆಣಿಕೆಯ ಉದ್ಯಮಿ ಮಿತ್ರರನ್ನು ಸಂತೈಸಲು, ಕೇಂದ್ರ ಚಿಕ್ಕ ವ್ಯಾಪಾರಿಗಳು, ಯುವಕರು ಮತ್ತು ರೈತರ ಕೈಬಿಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು