ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಷಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದದ್ದು ಸೊಳ್ಳೆ(Mosquito). ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳೇ ಹೆಚ್ಚು ಜನರನ್ನು ಕೊಲ್ಲುವ ಜೀವಿಗಳು. ಜಗತ್ತಿನಲ್ಲಿ ಸುಮಾರು 7 ಲಕ್ಷ ಜೀವವನ್ನು ಬಲಿ ತೆಗೆದುಕೊಳ್ಳುವುದು ಸೊಳ್ಳೆಗಳೇ! ಸಂಜೆ ಮತ್ತು ಬೆಳಗ್ಗಿನ ಸಮಯದಲ್ಲಿ ಈ ಸೊಳ್ಳೆಗಳ ಕಾಟ ಅಸಾಧ್ಯವಾಗಿರುತ್ತದೆ. ಸೊಳ್ಳೆ ಕಚ್ಚಿ ಉಂಟಾಗುವ ತುರಿಕೆಗಿಂತಲೂ ಅದು ತರುವ ಅಪಾಯದಿಂದಾಗಿ ಸೊಳ್ಳೆಯನ್ನು ನೋಡಿದರೆ ಭಯ ಉಂಟಾಗುತ್ತದೆ. ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು.

ಈ ಸೊಳ್ಳೆ ಮಾನವಕುಲಕ್ಕೆ ಅತಿ ಅಪಾಯಕಾರಿ ಜೀವಿ, ರಕ್ತ ಕುಡಿಯುವ ಪಿಶಾಚಿಯೆಂದೇ ಕರೆಯಬಹುದಾದ ಸೊಳ್ಳೆಯಿಂದ, ಮಲೇರಿಯಾ, ಡೆಂಘೀ, ಕಾಮಾಲೆ, ಚಿಕನ್ ಗುನ್ಯಾ, ಆನೆಕಾಲು ಹಾಗೂ ಮಿದುಳು ಜ್ವರ ಮುಂತಾದ ರೋಗಗಳಿಂದ ಜನರು ಸಾವನ್ನಪಿರುವುದು ವರದಿಯಾಗಿದೆ. ಹಾಗಾಗಿ ಸೊಳ್ಳೆಗಳು ಜಗತ್ತಿನ ಮಾರಕ ಪಿಡುಗುಗಳಾಗಿ ಹರಡುತ್ತಿವೆ.
ಸೊಳ್ಳೆ ಕಡಿತದಿಂದ ಬರುವ ರೋಗಗಳಲ್ಲಿ ಮಲೇರಿಯಾ ಮುಖ್ಯವಾದದ್ದು ಮತ್ತು ಬಹಳ ವ್ಯಾಪಕವಾದದ್ದು. ಪ್ರಪಂಚದಲ್ಲಿ ಸಾವಿಗೆ ಕಾರಣವಾಗುವ ಎಲ್ಲಾ ಸೋಂಕು ರೋಗಗಳಲ್ಲಿ ಮಲೇರಿಯಾಕ್ಕೆ ಐದನೇ ಸ್ಥಾನ. ಪ್ರತಿ ವರ್ಷ ಎರಡು ದಶಲಕ್ಷ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.
ಸಾಮಾನ್ಯವಾಗಿ ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತದೆ ಹಾಗೂ ಡೆಂಘೀ ಹರಡುವ ಸೊಳ್ಳೆ ಹಗಲಿನಲ್ಲಿ ಕಚ್ಚುತ್ತದೆ. ಮನೆಯೊಳಗೆ ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸುವುದು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಸೊಳ್ಳೆ ನಿವಾರಕ ಮುಲಾಮುಗಳನ್ನು ಬಳಸಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು. ಮೈಯನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸಿದರೆ ಉತ್ತಮ.

ಕಾಯಿಲೆ ಹರಡುವ ಸೊಳ್ಳೆಯ ಸಂತಾನಾಭಿವೃದ್ಧಿಯಾಗುವ ಮುಖ್ಯವಾದ ಸ್ಥಳ ನಿಂತ ನೀರು. ಮನೆಯ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಇನ್ನು, ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕೊಳೆತ ತರಕಾರಿ ಮತ್ತು ಕಸದ ಬುಟ್ಟಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ನಮ್ಮ ಸುತ್ತಮುತ್ತ ಬೆಳೆದಿರುವ ಗಿಡಗಂಟೆ ಮತ್ತಿತರ ಕಸವನ್ನು ತೆಗೆಸಿ ಸ್ವಚ್ಚವಾಗಿರಿಸುವುದು, ಮನೆಗಳ ಸುತ್ತ ತುಳಸಿ, ಲಾವಂಚ, ಗೊಂಡೆ ಹೂ, ನೆಲನೆಲ್ಲಿ, ಕಹಿಬೇವು ಮತ್ತಿತರ ಗಿಡಗಳನ್ನು ಬೆಳೆಸುವುದರಿಂದ ಗಾಳಿಯೂ ಶುದ್ಧವಾಗಿರುವುದು ಮತ್ತು ಸೊಳ್ಳೆಕಾಟದಿಂದ ಮುಕ್ತಿಯೂ ದೊರಕುತ್ತದೆ.
ಮಾರಣಾಂತಿಕ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡುವ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆ.20ನ್ನು ವಿಶ್ವ ಸೊಳ್ಳೆ ದಿನವನ್ನಾಗಿ ಆಚರಿಸಲಾಗುತ್ತದೆ. ಸೊಳ್ಳೆಗೂ ಒಂದು ದಿನವೇ ಎಂದು ತಮಾಷೆ ಮಾಡುವ ಬದಲು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
- ಪವಿತ್ರ ಸಚಿನ್