ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ನಿರ್ಮಾಣದಲ್ಲಿ ಸಿದ್ಧವಾದ ಚಿತ್ರ ‘ಮುಖವಾಡ ಇಲ್ಲದವನು 84’ ಎಂಬ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಈ ಹೊಸಬರ ತಂಡದ ಶ್ರಮಕ್ಕೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ವೇಣುಗೋಪಾಲ್ ಅತಿಥಿಯಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರಕ್ಕೆ ಗಣಪತಿ ಪಾಟೀಲ್ ಬೆಳಗಾವಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವೃತ್ತಿಯಲ್ಲಿ ಮೆಡಿಕಲ್ ಕೆಲಸದಲ್ಲಿದ್ದು, ದೂರದ ನ್ಯೂಜಿಲೆಂಡ್ನಲ್ಲಿ ವಾಸವಾಗಿದ್ದಾರೆ. ತುಂಬ ವರ್ಷಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದೆನಿಸಿದಾಗ ‘ಮುಖವಾಡ ಇಲ್ಲದವನು 84’ ಚಿತ್ರದ ಮೂಲಕ ಆಗಮಿಸಿದ್ದಾರೆ. ಇದೀಗ ಎಲ್ಲ ಶೂಟಿಂಗ್ ಕೆಲಸಗಳನ್ನು ಮುಗಿಸಿಕೊಂಡಿರುವ ಇಡೀ ತಂಡ, ಬಿಡುಗಡೆಯ ಸಿದ್ಧತೆಯಲ್ಲಿದೆ.
ಈ ಬಗ್ಗೆ ಮಾತನಾಡಿದ ರವಿ ಶ್ರೀವತ್ಸ, ‘ಕಳೆದ ಎರಡು ವರ್ಷಗಳ ಹಿಂದೆ ಸಿನಿಮೋತ್ಸವದಲ್ಲಿ ನಿರ್ಮಾಪಕರು ಪರಿಚಯವಾಗಿದ್ದು, ಅಂದಿನಿಂದ ಅವರಲ್ಲಿ ಸಿನಿಮಾ ಬಗ್ಗೆ ಅಪಾರ ಹಸಿವು ಮತ್ತು ತುಡಿತ ಇರುವುದನ್ನು ನಾನು ಗಮನಿಸಿದ್ದೇನೆ. ಸಿನಿಮಾ ಮಾಡುತ್ತಿರುವ ಬಗ್ಗೆಯೂ ಅವರು ಹೇಳಿಕೊಂಡಿದ್ದರು. ಅದರಂತೆ ಇದೀಗ ಚಿತ್ರ ಸಿದ್ಧವಾಗಿದೆ. ಚಿತ್ರಮಂದಿರಗಳೂ ಹಸಿದು ಕುಳಿತಿವೆ. ಬೇಗ ಚಿತ್ರಮಂದಿರಕ್ಕೆ ಬನ್ನಿ ಎಂದು ತಂಡಕ್ಕೆ ಹಾರೈಸಿದರು.
ಇನ್ನು ಚಿತ್ರದ ಬಗ್ಗೆ ಮಾಹಿತಿ ನೀಡಿರುವ ನಿರ್ಮಾಪಕರು, ಎರಡು ವರ್ಷದ ಹಿಂದೆ ಶಿವಕುಮಾರ್ ಪರಿಚಯವಾಗಿದ್ದು, ಸಿನಿಮಾ ಮಾಡುವ ಬಗ್ಗೆ ನಿರ್ಧಾರ ಅಂತಿಮವಾಗುತ್ತಿದ್ದಂತೆಯೇ, ಒಂದೇ ವಾರದಲ್ಲಿ ಶೂಟಿಂಗ್ ತಯಾರಿ ನಡೆಸಿ 40 ದಿನದಲ್ಲಿ ಚಿತ್ರೀಕರಣವನ್ನೂ ಮುಗಿಸಿದೆವು. ತುಂಬ ವಿಭಿನ್ನ ಶೈಲಿಯ ಸಿನಿಮಾ ಇದಾಗಿದ್ದು, ಸಂಭಾಷಣೆಗಳಲ್ಲಿ ತುಂಬ ಅರ್ಥವಿದೆ‘ ಎಂದರು.
ಶಿವಕುಮಾರ್ ಕಡೂರು ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದಾರೆ. ಈ ಮೊದಲು ಡ್ರೆಸ್ ಕೋಡ್ ಚಿತ್ರ ನಿರ್ದೇಶಿಸಿರುವ ಅನುಭವ ಅವರಿಗಿದೆ. ‘ನಾಲ್ಕು ವರ್ಷ ಸಾಧುಗಳ ಸಂಗ ಮಾಡಿ ಆಧ್ಯಾತ್ಮ, ವೈರಾಗ್ಯದ ಮೊರೆ ಹೋಗಿದ್ದೆ. ಆ ವೇಳೆಯಲ್ಲಿ ಮುಖವಾಡ ಇಲ್ಲದವನು ಎಂಬ ಪುಸ್ತಕವನ್ನೂ ಬರೆದಿದ್ದೆ. ಸಾಧು ಸಂತರಿಂದ ಕಲಿತದ್ದನ್ನೇ ಇದೀಗ ಸಿನಿಮಾ ಮಾಡಿದ್ದೇನೆ. ಸುವರ್ಣಮುಖಿ, ಬನ್ನೇರುಘಟ್ಟ, ಚಿಕ್ಕಮಗಳೂರು, ಬೆಳಗಾವಿ, ಅಂಬೂಲಿ ಸೇರಿ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ’ ಎಂದು ನಿರ್ದೇಶಕರು ನುಡಿದಿದ್ದಾರೆ.
ಕಾವ್ಯಾ ಗೌಡ, ರಚನಾ, ಸೊನಾಲಿ ರಾಯ್ ಮತ್ತು ಹರೀಶ್ ಸಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದುರ್ಗಾ ಪ್ರಸಾದ್ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಈ ಸಿನಿಮಾ ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡದ್ದು.