ಬೆಂಗಳೂರು, ಜ. 04: ಸರ್ಕಾರದ ಮೊನೊಗ್ರಾಮ್ ಬಳಸಿ ನಕಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ವಾಹನದ ಆರ್.ಸಿ. ಕಾರ್ಡ್ಗಳನ್ನು ತಯಾರಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಬೆಂಗಳೂರು ಸಿಸಿಬಿ ಪೊಲೀಸರು, ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಕಮಲೇಶ್ ಕುಮಾರ್, ಎಸ್.ಲೋಕೇಶ್, ಸುದರ್ಶನ್, ನಿರ್ಮಲ್ ಕುಮಾರ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಶ್, ತೇಜಸ್ ಸೇರಿದಂತೆ ಹತ್ತು ಮಂದಿ ವಂಚಕರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಕನಕಪುರ ರಸ್ತೆ ಗುಲ್ಲಾಳ ಗ್ರಾಮದ ಫ್ಲಾಟ್ ಒಂದರ ಮೇಲೆ ದಾಳಿ ನಡೆಸಿದ ವೇಳೆ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್.ಸಿ. ಕಾರ್ಡ್ ಗಳನ್ನು ತಯಾರಿಸುತ್ತಿದ್ದ ಜಾಲ ಪತ್ತೆಯಾಗಿದೆ.
ಆರೋಪಿಗಳು ಈ ಎಲ್ಲಾ ನಕಲಿ ದಾಖಲಾತಿಗಳನ್ನು ಪಾಸ್ ಪೋರ್ಟ್ ಪರಿಶೀಲನೆ, ಬ್ಯಾಂಕ್ ಲೋನ್ ಪಡೆಯಲು ಹಾಗೂ ಕದ್ದ ವಾಹನಗಳಿಗೆ ನಕಲಿ ಆರ್.ಸಿ ಮಾಡಿಕೊಳ್ಳಲು ಬಳಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತರಿಂದ ಅಪಾರ ಪ್ರಮಾಣದ ನಕಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಆರ್.ಸಿ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.