ರಾಯ್ಪುರ್ ಡಿ 27 : ಪೊಲೀಸರ ಗುಂಡಿನ ದಾಳಿಯಲ್ಲಿ 6 ಮಂದಿ ನಕ್ಸಲೀಯರು ಹತರಾಗಿರುವ ಘಟನೆ ಛತ್ತೀಸ್ಗಢ-ತೆಲಂಗಾಣ ಗಡಿ ಪ್ರದೇಶದಲ್ಲಿ ನಡೆದಿದೆ. ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಕನಿಷ್ಠ ಆರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢ ರಾಜಧಾನಿ ರಾಯ್ಪುರದಿಂದ 400 ಕಿಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಪ್ರದೇಶದ ಕಾಡಿನಲ್ಲಿ ಬೆಳಗ್ಗೆ 6 ರಿಂದ 7 ಗಂಟೆಯ ನಡುವೆ ಈ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ತೆಲಂಗಾಣ ಪೊಲೀಸ್ನ ವಿಶೇಷ ನಕ್ಸಲ್ ವಿರೋಧಿ ಗ್ರೇಹೌಂಡ್ಸ್ ಘಟಕದೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಆರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಬಸ್ತಾರ್ನಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಕ್ಮಾದ ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಜಂಟಿ ತಂಡವು ಗ್ರೇಹೌಂಡ್ಸ್ ತಂಡಕ್ಕೆ ಸಹಾಯಕ ಬೆಂಬಲವಾಗಿ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಮಾವೋವಾದಿಗಳ ಕಿಸ್ತಾರಾಮ್ ಪ್ರದೇಶ ಸಮಿತಿಗೆ ಸೇರಿದ ನಾಲ್ವರು ಮಹಿಳೆಯರು ಸೇರಿದಂತೆ ಆರು ನಕ್ಸಲರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.