Shivmogga: ಕಳೆದ ಕೆಲ ದಿನಗಳಿಂದ ವಿಪರೀತ ಗಾಳಿ, ಮಳೆಗೆ ತೋಟದಲ್ಲಿದ್ದ ಅಡಕೆ, ಬಾಳೆ ಮರಗಳು ಬುಡಸಮೇತ ಉರುಳಿವೆ. ಕೆಲವು ಮರಗಳು ಗಾಳಿಗೆ ತೇಲಾಡಿ ಅರ್ಧದಲ್ಲೇ ತುಂಡಾಗಿವೆ. ಮರಕ್ಕೆ ಮರ ಡಿಕ್ಕಿಯಾಗಿ ಅಡಕೆ ಫಸಲು ಹೇರಳ ಪ್ರಮಾಣದಲ್ಲಿ ಉದುರಿದ್ದು ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಇನ್ನೊಂದೆಡೆ ಅತಿವೃಷ್ಟಿಯಿಂದಾಗಿ ನೀರುಗೊಳೆ, ಕೊಳೆರೋಗ ಅಡಕೆ ಮರಕ್ಕೆ ವ್ಯಾಪಿಸಿದೆ. ನೈಸರ್ಗಿಕ ವಿಕೋಪಕ್ಕೆ ಅಡಕೆ,ಕಾಳು ಮೆಣಸು ಫಸಲು ತುತ್ತಾಗಿದ್ದರೂ ಪರಿಹಾರಧನ ನೀಡಲು ಕೇಂದ್ರ, ರಾಜ್ಯ ಸರಕಾರ ವಿಪತ್ತು ಪರಿಹಾರ ಹಂಚಿಕೆ ಸಂಬಂಧ ಚೌಕಾಸಿ ನಿಯಮವನ್ನು ಜಾರಿಮಾಡಿದೆ.
ನೈಸರ್ಗಿಕ ವಿಕೋಪದಲ್ಲಿ ಬೆಳೆ, ಸಾಗುವಳಿ ಜಮೀನಿಗೆ ಶೇ.33 ಹಾನಿ ಉಂಟಾದರೆ ಮಾತ್ರ ಪರಿಹಾರ ಧನ ಲಭ್ಯ. ಇಷ್ಟು ಪ್ರಮಾಣದಲ್ಲಿ ಹಾನಿಗೆ ಸಿಗುವ ಪರಿಹಾರ ಧನ ಕೂಡ ಅತ್ಯಲ್ಪ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ರಾಜ್ಯ ವಿಪತ್ತು ಪರಿಹಾರ ನಿಧಿ ಹಂಚಿಕೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ನಿಯಮ ಹೀಗಿವೆ ಎಂದರೆ ಕೊಟ್ಟಂತಿರಬೇಕು ಆದರೆ ಕೊಡಬಾರದು ಎನ್ನುವಂತೆ.1 ಹೆಕ್ಟೆರ್ ಅಡಕೆ ಪ್ರದೇಶದಲ್ಲಿ ಶೇ.33 ಮರ, ಬೆಳೆ ಹಾನಿಗೀಡಾದರೆ ಹಾಲಿ ನಿಯಮದ ಪ್ರಕಾರ ರೈತರಿಗೆ ಸಿಗುವುದು ಕೇವಲ 22,500 ರೂ. ಪರಿಹಾರಧನ ಮಾತ್ರ. ಅತಿವೃಷ್ಟಿಯಿಂದ ಈಗಾಗಲೇ ಸಾಕಷ್ಟು ಅವಘಡಗಳು ಸಂಭವಿಸಿದರೂ ಬೆಳೆ, ಮರ ಹಾನಿ ಕುರಿತಂತೆ ಅರ್ಜಿ ಸಲ್ಲಿಸುವಂತೆ ರೈತರಿಗೆ ಸರಕಾರವು ಸೂಚನೆ ನೀಡಿಲ್ಲ. ಅರ್ಜಿ ಕೊಟ್ಟರೂ ನಿಯಮದ ಪ್ರಕಾರ ಬಹುತೇಕ ರೈತರಿಗೆ ಪರಿಹಾರಧನ ಸಿಗುವುದೇ ಇಲ್ಲ.
ಬೆಳೆ, ಸಾಗುವಳಿ ಪ್ರದೇಶ ಹಾನಿ ಕುರಿತಂತೆ ಕೇಂದ್ರ ಸರಕಾರ 2023 ಜುಲೈ 11 ರಂದು ಜಾರಿಗೊಳಿಸಿದ ರಾಷ್ಟ್ರೀಯ ವಿಪತ್ತು ಪರಿಹಾರನಿಧಿ ನಿಯಮಾವಳಿ, ರಾಜ್ಯ ಸರಕಾರದ ರಾಜ್ಯ ವಿಪತ್ತು ಪರಿಹಾರನಿಧಿ ಹಂಚಿಕೆ ಆದೇಶ ರೈತರ ನಿದ್ದೆಗೆಡಿಸುವಂತಿದೆ. ಹಿಂದೆಲ್ಲಾ ಸರಕಾರ ಹಾನಿ ಬಗ್ಗೆ ಅರ್ಜಿ ಪಡೆದು ಪರಿಹಾರಧನ ನೀಡುತ್ತಿತ್ತು. ಕೇಂದ್ರ, ರಾಜ್ಯ ಸರಕಾರ ನಷ್ಟಕ್ಕೀಡಾದ ರೈತರ ಕೈ ಹಿಡಿದು ಸಹಕರಿಸದೆ ಈಗ ಅಸಡ್ಡೆಯಾಗಿ ಕಾಣುತ್ತಿದೆ.100 ಅಡಕೆ ಮರ ಪೈಕಿ 33 ಮರ ಹಾನಿಗೀಡಾಗಲೇ ಬೇಕು. ಅದರೊಳಗಿನ ಸಂಖ್ಯೆಯ ಮರಗಳ ಹಾನಿಗೆ ಪರಿಹಾರಧನ ಇಲ್ಲ.ಪ್ರಕೃತಿ ವಿಕೋಪ ಪ್ರದೇಶ ಎಂದು ಘೋಷಿಸಿದರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರಧನ ಲಭ್ಯವಿದೆ. ಅತ್ಯಂತ ಸರಳ ಮಾರ್ಗದಲ್ಲಿ ಬ್ಯಾಂಕ್ ಸಾಲ ತೀರುವಳಿ, ಹೊಸ ಸಾಲ ಪಡೆಯಲು ಅವಕಾಶ ಇದೆ. ಆದರೆ, ವೈಯುಕ್ತಿಕ ಹಾನಿ ಪ್ರಮಾಣವನ್ನು ಇಲಾಖೆಗಳಿಂದ ವರದಿ ಪಡೆಯುವ ಕ್ರಮದಲ್ಲಿ ಸಂತ್ರಸ್ತರಿಗೆ ಅತ್ಯಲ್ಪ ಪರಿಹಾರಧನ ಹಂಚಿಕೆ ನಿಯಮ ಅಸ್ತಿತ್ವದಲ್ಲಿದೆ.ಹಾಗಾಗಿ ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾಗಿ ಗಮನಿಸಬೇಕು. ಎಂದು ಹಲವಾರು ರೈತರು ಬೇಡಿಕೆ ಸಲ್ಲಿಸಲಿದ್ದಾರೆ.