ಆನೆಗಳಿಗೂ ರಕ್ಷಣೆ, ಪ್ರವಾಸಿಗರಿಗೂ (New rules for elephant camps) ಭದ್ರತೆ: ರಾಜ್ಯ ಸರ್ಕಾರದಿಂದ ಸಮಗ್ರ ಸುರಕ್ಷತಾ ಮಾರ್ಗಸೂಚಿ
ಗ್ರೀನ್ ಝೋನ್ನಲ್ಲಿ ಮಾತ್ರ ವೀಕ್ಷಣೆಗೆ ಅವಕಾಶ; ಅಪಾಯಕಾರಿ ಸ್ಥಿತಿಯಲ್ಲಿರುವ ಆನೆಗಳನ್ನು ಸಾರ್ವಜನಿಕರ ಮುಂದೆ ತರಲು ನಿರ್ಬಂಧ.
ಸಿಸಿಟಿವಿ ನಿಗಾ, ಪ್ರವಾಸಿಗರ ಸಂಖ್ಯೆಗೆ ಮಿತಿ, ನಿಯಮ ಉಲ್ಲಂಘಿಸಿದರೆ ಶಿಬಿರ ಮುಚ್ಚುವ ಎಚ್ಚರಿಕೆ.
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದ ಬಳಿಕ ರಾಜ್ಯ ಸರ್ಕಾರ (New rules for elephant camps) ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲಾ ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಆನೆಗಳ ಕಲ್ಯಾಣಕ್ಕೆ ಒತ್ತು ನೀಡುವ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಕರ್ನಾಟಕ ಅರಣ್ಯ ಇಲಾಖೆ ಮೊದಲ ಬಾರಿಗೆ ಸಮಗ್ರ ‘ಕರ್ನಾಟಕ ಆನೆ ಶಿಬಿರ ಸುರಕ್ಷತಾ ಪ್ರೋಟೋಕಾಲ್’ ಅನ್ನು ರೂಪಿಸಿದ್ದು, ರಾಜ್ಯದ ಎಲ್ಲ ಆನೆ ಶಿಬಿರಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದೆ.

ಮೇ 19ರಂದು ನಡೆದ ದುರಂತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಪ್ರವಾಸಿಗರು ಮತ್ತು ಆನೆಗಳ ನಡುವಿನ ನೇರ ಸಂಪರ್ಕಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರವಾಸಿಗರು ಆನೆಗಳನ್ನು ಮುಟ್ಟುವುದು, ಆಹಾರ ನೀಡುವುದು, ಸ್ನಾನ ಮಾಡಿಸುವುದು (New rules for elephant camps) ಅಥವಾ
ಅತೀ ಸಮೀಪದಿಂದ ನೋಡುವುದಕ್ಕೆ ಅವಕಾಶ ಇರುವುದಿಲ್ಲ. ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ.
ಶಿಬಿರಗಳಲ್ಲಿ ವಿಶೇಷವಾಗಿ ಗುರುತಿಸಲಾದ ‘ಹಸಿರು ವಲಯ’ (ಗ್ರೀನ್ ಝೋನ್) ಅಥವಾ ವೀಕ್ಷಣಾ ಗ್ಯಾಲರಿಗಳಲ್ಲಿಯೇ ಪ್ರವಾಸಿಗರು ನಿಂತು ಆನೆಗಳನ್ನು ವೀಕ್ಷಿಸಬೇಕಾಗುತ್ತದೆ.
ಈ ಕ್ರಮದ ಮೂಲಕ ಆನೆಗಳಿಗೆ ಅನಗತ್ಯ ಒತ್ತಡ ಉಂಟಾಗುವುದನ್ನು ತಡೆಯುವ ಜೊತೆಗೆ, ಪ್ರವಾಸಿಗರ ಜೀವ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಆನೆ ಶಿಬಿರಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೂ ಕಟ್ಟುನಿಟ್ಟಿನ ನಿಗಾ ಇರಲಿದೆ. ಎಲ್ಲಾ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಅಳವಡಿಸಿ, ಆನೆಗಳ ಚಲನವಲನ ಹಾಗೂ ಪ್ರವಾಸಿಗರ ವರ್ತನೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ಒಂದು ಶಿಬಿರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಗರಿಷ್ಠ 10 ಆನೆಗಳನ್ನು ಮಾತ್ರ ಇರಿಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಶಿಬಿರದ ಸಾಮರ್ಥ್ಯವನ್ನು ಆಧರಿಸಿ ಒಂದೇ ವೇಳೆ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಆನೆಗಳನ್ನು ವೀಕ್ಷಿಸಲು 20 ರಿಂದ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಅದಕ್ಕೂ ಮೊದಲು ಸುರಕ್ಷತಾ ಸೂಚನೆಗಳ ಕುರಿತು 10 ನಿಮಿಷಗಳ ಮಾಹಿತಿ ನೀಡಲಾಗುತ್ತದೆ.
ರಾಜ್ಯದ ಆನೆ ಶಿಬಿರಗಳನ್ನು ಮೂರು ಪ್ರತ್ಯೇಕ ವಲಯಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ ಆನೆಗಳಿಗೆ ಆಹಾರ, ಸ್ನಾನ, ಚಿಕಿತ್ಸೆ ಮತ್ತು ಆರೈಕೆ ಕಾರ್ಯಗಳು
ನಡೆಯಲಿದ್ದು, ಇಲ್ಲಿ ಮಾವುತರು ಹಾಗೂ ಸಿಬ್ಬಂದಿಗೆ ಮಾತ್ರ ಪ್ರವೇಶವಿರುತ್ತದೆ. ಕಿತ್ತಳೆ ವಲಯವನ್ನು ಸಿಬ್ಬಂದಿ ಮತ್ತು ತುರ್ತು ಕಾರ್ಯಾಚರಣೆಗಳಿಗೆ ಮೀಸಲಿಡಲಾಗಿದೆ.
ಹಸಿರು ವಲಯದಲ್ಲಿ ಮಾತ್ರ ಪ್ರವಾಸಿಗರಿಗೆ ಮಾರ್ಗದರ್ಶಕರ ಸಹಾಯದಿಂದ ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.
ಜೊತೆಗೆ ಮದಾವಸ್ಥೆಯಲ್ಲಿರುವ, ಗಾಯಗೊಂಡಿರುವ, ಅಸ್ವಸ್ಥವಾಗಿರುವ, ಒತ್ತಡದಲ್ಲಿರುವ, ಇತ್ತೀಚೆಗೆ ಸೆರೆ ಹಿಡಿದ ಅಥವಾ ನಿಯಂತ್ರಣಕ್ಕೆ ಬಾರದ ಆನೆಗಳನ್ನು ಸಾರ್ವಜನಿಕ
ವೀಕ್ಷಣೆಗೆ ತರಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಆರು ತಿಂಗಳೊಳಗಿನ ಮರಿಯೊಂದಿಗೆ ಇರುವ ತಾಯಿ ಆನೆಗಳಿಗೂ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ.
ರಾಜ್ಯದಲ್ಲಿ ಒಟ್ಟು 10 ಆನೆ ಶಿಬಿರಗಳಲ್ಲಿ 114 ಆನೆಗಳಿದ್ದು, ಇದು ದೇಶದಲ್ಲೇ ಅತಿ ದೊಡ್ಡ ಸಂಖ್ಯೆಯಾಗಿದೆ. ದುಬಾರೆ, ಹಾರಂಗಿ, ಮತ್ತಿಗೋಡು, ಸಕ್ರೆಬೈಲು ಹಾಗೂ ದಾಂಡೇಲಿಯ ಪನ್ಸೋಲಿ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.
ಈ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿರುವುದನ್ನು ಪರಿಶೀಲಿಸಿ ಪ್ರಮಾಣೀಕರಣ ನೀಡಿದ ಬಳಿಕವೇ ಶಿಬಿರಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗುತ್ತದೆ.
ನಿಯಮ ಉಲ್ಲಂಘನೆಯಾದರೆ ಶಿಬಿರವನ್ನು ತಾತ್ಕಾಲಿಕವಾಗಿ ಮುಚ್ಚುವ ಅಧಿಕಾರವೂ ಇಲಾಖೆಗೆ ಇರಲಿದೆ. ಆನ್ಲೈನ್ (Online) ಹಾಗೂ ಸ್ಥಳದಲ್ಲೇ ಟಿಕೆಟ್
ವ್ಯವಸ್ಥೆ ಜಾರಿಯಾಗಲಿದ್ದು, ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ವಿಶೇಷಚೇತನರ ಮೇಲೆ ವಿಶೇಷ ಗಮನಹರಿಸಲಾಗುತ್ತದೆ.
ಈ ಹೊಸ ವ್ಯವಸ್ಥೆಯು ಪ್ರವಾಸಿಗರ ಸುರಕ್ಷತೆ ಮತ್ತು ಆನೆಗಳ ಕಲ್ಯಾಣದ ನಡುವೆ ಸಮತೋಲನ ಸಾಧಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ.
ಇದನ್ನು ಓದಿ : https://vijayatimes.com/karnataka-emerges-as-tech-capital/