ಚಾಮರಾಜನಗರ, ಡಿ. 24: ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿರುವ ಪರಿಣಾಮ ವಿಧಿಸಲಾಗಿರುವ ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ಚಾಮರಾಜನಗರದ ಐತಿಹಾಸಿಕ ಪ್ರವಾಸಿ ತಾಣವಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ.
ಸರ್ಕಾರದ ಆದೇಶದಂತೆ ಡಿ24ರ ರಾತ್ರಿ 11ಗಂಟೆಯಿಂದ 02-01-2021ರ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೀಗಾಗಿ ದೇವಾಲಯಕ್ಕೆ ಬರುವ ಎಲ್ಲ ಭಕ್ತಾದಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಶ್ರೀ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.
- ಕೊಠಡಿ ಆನ್ಲೈನಿನಲ್ಲಿ ಕಾಯ್ದಿರಿಸಿರುವ ಭಕ್ತಾದಿಗಳು ರಾತ್ರಿ 10-30ಗಂಟೆಯೊಳಗೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾಹಿತಿ ಕೇಂದ್ರದಲ್ಲಿ ನೊಂದಾಯಿಸಿ ಸಂಬಂಧಪಟ್ಟ ವಸತಿ ಗೃಹದೊಳಗೆ ವಾಸ್ತವ್ಯಕ್ಕೆ 10-45ರೊಳಗೆ ತಲುಪತಕ್ಕದ್ದು.
- ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಮಾಹಿತಿ ಕೇಂದ್ರ ಮುಚ್ಚಲಾಗುವುದು ಹಾಗೂ ಯಾವುದೇ ಕೊಠಡಿಗಳನ್ನು ಈ ಸಮಯದಲ್ಲಿ ವಿತರಿಸಲಾಗುವುದಿಲ್ಲ.
- ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಸಂಪೂರ್ಣ ಲಾಕ್ಔಟ್ ಪಾಲಿಸಲಾಗುವುದು. ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ.
- ದೇವಸ್ಥಾನ, ಲಾಡು ಕೌಂಟರ್ ಹಾಗೂ ದಾಸೋಹಕ್ಕೆ ಬರುವವರು ರಾತ್ರಿ 10ರ ಒಳಗಾಗಿ ದರ್ಶನ ಪಡೆಯುವುದು, ದಾಸೋಹ ಸ್ವೀಕರಿಸುವುದು ಹಾಗೂ ಲಾಡು ಖರೀದಿಸುವುದು. ರಾತ್ರಿ 10ರ ನಂತರ ಈ ಮೂರೂ ಸೇವೆಗಳು ಲಭ್ಯವಿರುವುದಿಲ್ಲ.
- ಕೊಠಡಿ ಕಾಯ್ದಿರಿಸಿರುವವರು ನಂತರ ಬಂದಲ್ಲಿ ರೀಫಂಡ್ ನೀಡಲಾಗುವುದಿಲ್ಲ. ಈ ಬಗ್ಗೆ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
- ಬೆಳಿಗ್ಗೆ 4ಕ್ಕೆ ಪ್ರಾರಂಭವಾಗುವ ಅಭಿಷೇಕಕ್ಕೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಆದರೆ ಸಂಪ್ರದಾಯಿಕವಾಗಿ ಅಭಿಷೇಕವನ್ನು ಬೇಡಗಂಪಣರು ಹಾಗೂ ದೇವಾಲಯದ ಒಳಾವರಣದ ಸಿಬ್ಬಂದಿ ನಡೆಸಲಿರುವರು. ಬೆಳಿಗ್ಗೆ 5ರ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.
- ದೇವಾಲಯದ ಆವರಣದಲ್ಲಿ ವಸತಿ ಗೃಹಗಳು, ಕಾಟೇಜುಗಳು ಹಾಗೂ ಡಾರ್ಮಿಟರಿ ಹೊರತುಪಡಿಸಿ, ಬೇರೆ ಯಾವುದೇ ತೆರೆದ ಜಾಗಗಳು ಹಾಗೂ ದೇವಾಲಯದ ಪಕ್ಕದಲ್ಲಿರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯ ಷೆಡ್ನಲ್ಲಿ ಉಳಿದುಕೊಳ್ಳಬಾರದಾಗಿ ಮನವಿ.
- ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶ್ರೀ ಕ್ಷೇತ್ರಕ್ಕೆ ಬರುವುದು ಹಾಗೂ ಶ್ರೀ ಕ್ಷೇತ್ರದಿಂದ ತೆರಳುವವರೆಗೆ ಧರಿಸಿರಲು ಕೋರಿದೆ. ವೈಯುಕ್ತಿಕವಾಗಿ ಸ್ಯಾನಿಟೈಸರ್ ಇಟ್ಟುಕೊಳ್ಳಲು ಹಾಗೂ ಆಗ್ಗಾಗ್ಗೆ ಉಪಯೋಗಿಸಲು ಕೋರಿದೆ.
- ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದು. ವಿಶೇಷವಾಗಿ ದೇವಸ್ಥಾನದ ಕ್ಯೂ ಲೈನಿನಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡೇ ದರ್ಶನ ಮಾಡುವುದು.
- ದಾಸೋಹದಲ್ಲಿ ಕಡ್ಡಾಯವಾಗಿ ಕ್ಯೂ ಲೈನಿನಲ್ಲಿ ಹಾಗೂ ಕುಳಿತುಕೊಳ್ಳುವ ಮೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
- ಯಾವುದೇ ಸಂದೇಹವಿದ್ದಲ್ಲಿ ಮಾಹಿತಿ ಕೇಂದ್ರದಲ್ಲಿ ನಿರ್ವಹಣೆಯಲ್ಲಿರುವ ಸಹಾಯವಾಣಿ ನಂಬರ್ 1860 425 4350 ಗೆ ಕರೆ ಮಾಡುವುದು.
ಸರ್ಕಾರದ ಆದೇಶವನ್ನು ಚಾಚೂ ತಪ್ಪದೇ ಪಾಲಿಸುವಲ್ಲಿ ತಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದು ತಿಳಿಸಿದ್ದಾರೆ.