ನವದೆಹಲಿ,ಜೂ.17: ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಅಂಗಾಂಗಳಿಂದ ಬೇರ್ಪಡಿಸಿದ ದ್ರವ (ಸೀರಮ್) ಬಳಕೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತ್ ಬಯೋಟೆಕ್ ಬುಧವಾರ ಸ್ಪಷ್ಟನೆ ನೀಡಿದೆ. ಲಸಿಕೆ ಬಗ್ಗೆ ಮಾಹಿತಿ ತಿಳಿಯಲು ಏಪ್ರಿಲ್ನಲ್ಲಿ ಸಲ್ಲಿಸಲಾದ ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು . ಈ ಮಾಹಿತಿಯನ್ನು ಸಾರ್ವಜನಿಕರಿಂದ ತಡೆಹಿಡಿಯಲಾಗಿದೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸುತ್ತಿದ್ದರು. ಆದರೆ ಭಾರತ್ ಬಯೋಟೆಕ್ ಮತ್ತು ಆರೋಗ್ಯ ಸಚಿವಾಲಯ ಎರಡೂ ಈ ಆರೋಪಗಳನ್ನು ನಿರಾಕರಿಸಿದೆ.
ಕೊವ್ಯಾಕ್ಸಿನ್ ಲಸಿಕೆಯನ್ನು ರೂಪಿಸುವಾಗ ನಡೆದ ಪ್ರಯೋಗಗಳಲ್ಲಿ, ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸೀರಮ್ ಬಳಕೆಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಹೊರಬಂದಿರುವ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕರುವಿನ ರಕ್ತದ ಕಣಗಳು ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಗೆ 20 ಏಪ್ರಿಲ್ 2021 ರಂದು ವಿಕಾಸ್ ಪಾಟ್ನಿ RTI ಅರ್ಜಿ ಸಲ್ಲಿಸಿದ್ದರು.