ನವದೆಹಲಿ, ಡಿ. 10: ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ “ಸಂವಿಧಾನ ಸಭಾಂಗಣ” ಹೊಸ ಸಂಸತ್ ಭವನ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಐತಿಹಾಸಿಕ ಭಾಷಣದಲ್ಲಿ ಕರ್ನಾಟಕದ ಬಸವಣ್ಣನವರ ಅನುಭವ ಮಂಟದ ಧ್ಯೇಯ, ಉದ್ದೇಶವನ್ನು ಕನ್ನಡದಲ್ಲಿಯೇ ಸ್ಮರಿಸಿಕೊಂಡು ಕನ್ನಡಿಗರ ಗಮನ ಸೆಳೆದರು.
ವಿಶ್ವದ ಮೊದಲ ಸಂಸತ್ ಬಸವಣ್ಣನವರ ಅನುಭವ ಮಂಟಪ. ಅದೊಂದು ಜನಸಭೆಯಾಗಿತ್ತು. ಅಲ್ಲಿ ನಾಡಿನ ಹಿತ, ಅಭಿವೃದ್ಧಿಗಳ ಕುರಿತ ಚರ್ಚೆಗಳಾಗುತ್ತಿದ್ದವು. ಅದು ಇಡೀ ಜಗತ್ತಿಗೆ ಮಾದರಿಯಾದುದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಒಂದು ಸಂಸ್ಕೃತಿ, ಜೀವನ ಮೌಲ್ಯ, ಜೀವನ ಪಥ ಮತ್ತು ದೇಶದ ಜೀವಾಳ . ಶತಮಾನಗಳ ಅನುಭವದ ಆಧಾರದ ಮೇಲೆ ಅಭಿವೃದ್ಧಿ ಪಡಿಸಿದ ವ್ಯವಸ್ಥೆ ನಮ್ಮ ಈ ಪ್ರಜಾಪ್ರಭುತ್ವ ಎಂದು ಪ್ರಧಾನಿ ವಿವರಿಸಿದರು.
ಒಬ್ಬ ಸಂಸದನಾಗಿ 2014ರಲ್ಲಿ ಮೊಟ್ಟ ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದ ಆ ಸಂದರ್ಭ ನನ್ನ ಬದುಕಿನ ಅವಿಸ್ಮರಣೀಯವಾದುದು. ಪ್ರಜಾಪ್ರಭುತ್ವದ ದೇಗುಲವನ್ನು ಪ್ರವೇಶಿಸುವ ಮೊದಲು ನಾನು ತಲೆಬಾಗಿ ನಮಸ್ಕರಿಸಿದ್ದೇನೆ, ಗೌರವ ಸಲ್ಲಿಸದ್ದೇನೆ. ಈ ದಿನ 130 ಕೋಟಿಗೂ ಅಧಿಕ ಭಾರತೀಯರಿಗೆ ಹೆಮ್ಮೆಯ ದಿನವಾಗಿದ್ದು, ನಾವೆಲ್ಲರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ.
ಹೊಸ ಸಂಸತ್ ಭವನದ ಆವರಣವು ಹಳೆಯ ಮತ್ತು ಹೊಸ ಕಟ್ಟಡಗಳನ್ನು ಒಳಗೊಂಡಿರಲಿದೆ. ಹಳೆಯ ಸಂಸತ್ ಭವನ ದೇಶದ ಕಾಲಕಾಲದ ಅಗತ್ಯಗಳನ್ನು ಪೂರೈಸುವುದಕ್ಕೆ ಬಳಕೆಯಾಗಲಿದ್ದು, ಹೊಸ ಸಂಸತ್ ಭವನದಲ್ಲಿ ದೇಶವನ್ನು ಭವಿಷ್ಯದತ್ತ ಕೊಂಡೊಯ್ಯುವ ಚಾಲನಾ ಶಕ್ತಿ ಒದಗಿಸಲಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.
ಇಪ್ಪತ್ತೊಂದನೇ ಶತಮಾನ ಭಾರತಕ್ಕೆ ಸೇರಿದ್ದು. ಭಾರತಕ್ಕೆ ಬಂದೊದಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಮ್ಮೆಲ್ಲರಿಗೂ ದೇಶ ಮೊದಲು. ಆ ಭಾವದೊಂದಿಗೆ ಕೆಲಸ ಮಾಡೋಣ. ಆತ್ಮನಿರ್ಭರ ಭಾರತವನ್ನು ಕಟ್ಟಿ ಜಗತ್ತಿಗೆ ಮಾದರಿಯಾಗೋಣ. ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.