ಗೋವಾ, ಜು. 29: ಕಳೆದ ವಾರ ಗೋವಾದ ಬೆನೌಲಿಮ್ ಕಡಲ ತೀರದ ಬಳಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ದೇಶದಲ್ಲಿ ಸುದ್ದಿಯಾಗಿತ್ತು. ಈ ಘಟನೆ ಕುರಿತು ಇಂದು ವಿಧಾನಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತಮ್ಮ ಮಕ್ಕಳನ್ನು ತಡರಾತ್ರಿವರೆಗೆ ಹೊರಗಲು ಬಿಟ್ಟಿರುವ ಬಗ್ಗೆ ಮೊದಲು ಪೋಷಕರು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ. 14 ವರ್ಷದ ಮಗಳೊಬ್ಬಳು ರಾತ್ರಿ ಪೂರ್ತಿ ಬೀಚ್ ಬಳಿ ಸಮಯ ಕಳೆಯುತ್ತಾಳೆ. ಈ ಬಗ್ಗೆ ಪೋಷಕರು ಚಿಂತಿಸಬೇಕು. ಮಕ್ಕಳು ಹೇಳಿದ ಮಾತು ಕೇಳಲಿಲ್ಲ ಎಂದರೆ ಸರ್ಕಾರ ಮತ್ತು ಪೊಲೀಸರ ಮೇಲೆ ಜವಾಬ್ದಾರಿ ಹೊರಿಸಲು ಸಾಧ್ಯವಿಲ್ಲ ಎಂಬ ಬೇಜಾವಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಜೊತೆಗೆ ಗೃಹ ಮಂತ್ರಿಯಾಗಿರುವ ಪ್ರಮೋದ್ ಸಾವಂತ್, ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ನಿಷ್ಕಾಳಜಿಯಾಗಿ ಮಾತನಾಡಿದ್ದು, ಘಟನೆಗೆ ಪ್ರಮುಖ ಕಾರಣ ಅವರ ಪೋಷಕರೇ ಎಂಬ ರೀತಿ ಉತ್ತರ ನೀಡಿದ್ದಾರೆ.
ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಅದರಲ್ಲೂ ಅಪ್ರಾಪ್ತ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ರಾತ್ರಿ ಸಮಯದಲ್ಲಿ ಈ ರೀತಿ ಏಕೆ ಬಿಡಬೇಕು ಎಂಬ ಅರ್ಧದಲ್ಲಿ ಅವರು ಸದನದಲ್ಲಿ ಉತ್ತರಿಸಿದ್ದಾರೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧಿಗಳು ಜೈಲಿನಲ್ಲಿದ್ದರೆ, ಜನರು ಯಾಕೆ ರಾತ್ರಿ ಸಮಯದಲ್ಲಿ ತಿರುಗಾಡಲು ಭಯಪಡಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಫಾರ್ವಡ್ ಪಾರ್ಟಿ ಶಾಸಕ ವಿಜಯ್ ಸರ್ದೇಸಾಯಿ, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು. ಜನರ ಸುರಕ್ಷತೆ ಕಾಪಾಡುವುದು ರಾಜ್ಯ ಸರ್ಕಾರ ಮತ್ತು ಪೊಲೀಸರ ಕರ್ತವ್ಯವಾಗಿದೆ. ಈ ರೀತಿ ನಿಷ್ಕಾಳಜಿಯಾಗಿ ಮಾತನಾಡುವ ಸಿಎಂಗೆ ಆ ಸ್ಥಾನದಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಗೋವಾ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಈ ಹಣೆ ಪಟ್ಟಿ ಕಳಚಿಕೊಂಡಿದೆ. ರಾಜ್ಯದ ಜನರಿಗೆ ಸುರಕ್ಷತೆ ಅಭಯ ನೀಡುವ ಬದಲು ಗೋವಾ ಸಿಎಂ ಘಟನೆಗೆ ಪೋಷಕರನ್ನೇ ಹೊಣೆ ಮಾಡುತ್ತಿದ್ದಾರೆ ಎಂದು ಶಾಸಕ ರೋಹನ್ ಖವ್ಟೆ ಟ್ವೀಟರ್ನಲ್ಲಿ ಹರಿಹಾಯ್ದಿದ್ದಾರೆ.
ಏನಿದು ಘಟನೆ:
ಪಣಜಿಯಿಂದ 30 ಕಿ.ಮೀ ದೂರದ ಬೆನೌಲಿಮ್ ಕಡಲ ತೀರದ ಬಳಿ ಭಾನುವಾರ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ನಡೆಸಲಾಗಿತ್ತು. ಸ್ನೇಹಿತರೆಲ್ಲಾ ಸೇರಿ ಬೀಚ್ ಬಳಿ ಪಾರ್ಟಿ ನಡೆಸಿದ್ದರು. ರಾತ್ರಿ ಪಾರ್ಟಿಗೆ ಹೋದ 10 ಜನರಲ್ಲಿ ಆರು ಜನ ಮನೆಗೆ ತೆರಳಿದ್ದು, ಇನ್ನುಳಿದ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಅಲ್ಲಿಯೇ ರಾತ್ರಿ ಕಳೆದಿದ್ದರು. ಈ ವೇಳೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ.