- ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆದ ಪತಂಜಲಿ (Patanjali ghee fails quality test) ತುಪ್ಪ
- ಆರೋಗ್ಯಕ್ಕೆ ಅಪಾಯಕಾರಿಯೆಂದು ವರದಿ, ಬ್ರ್ಯಾಂಡ್ ದೊಡ್ಡದಾದರೂ ಗುಣಮಟ್ಟದಲ್ಲಿ ಸ್ವೀಕಾರಾರ್ಹವಲ್ಲ ಎಂದು ಸಂದೇಶ ನೀಡಿದ ಕೋರ್ಟ್
- ಉತ್ಪಾದಕ ಮತ್ತು ವ್ಯಾಪಾರಿಗಳ ಮೇಲೂ ದಂಡ ವಿಧಿಸಿದ ಪಿಥೋರಗಢ ಕೋರ್ಟ್
Pithoragarh: ಭಾರತದ ಪ್ರಮುಖ ಕಂಪನಿಯಾಗಿರುವ ಪತಂಜಲಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲವಾಗಿರುವ ಕಾರಣ

ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ದಂಡ ವಿಧಿಸಿದೆ. 2020ರಲ್ಲಿ ಪತಂಜಲಿ ತಯಾರಿಸಿದ ಹಸುವಿನ ತುಪ್ಪದ ಮಾದರಿಯನ್ನು ಪರಿಶೀಲಿಸಿದಾಗ ಅದು ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ
ಎಂದು ರಾಜ್ಯ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು ಸ್ಪಷ್ಟಪಡಿಸಿದ್ದವು. ಇದರಿಂದ ಉತ್ಪಾದಕ, ವಿತರಕ ಮತ್ತು ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಒಟ್ಟಾರೆ 1.40 ಲಕ್ಷ
ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ. ದೇಶಾದ್ಯಂತ ಗ್ರಾಹಕರಲ್ಲಿ ದೊಡ್ಡ ಹೆಸರು ಹೊಂದಿರುವ ಪತಂಜಲಿ ಬ್ರ್ಯಾಂಡ್ಗೆ (Patanjali Brand) ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ. ಅಷ್ಟಕ್ಕೂ ಮೂಲ
ಪ್ರಕರಣವು 2020ರಲ್ಲಿ ಆರಂಭವಾಗಿತ್ತು. ಪಿಥೋರಗಢದ (Pithoragarh) ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಅವರು ಕರಣ್ ಜನರಲ್ ಸ್ಟೋರ್ನಿಂದ ಪತಂಜಲಿ ತುಪ್ಪದ ಮಾದರಿಯನ್ನು ನಿಯಮಿತ
ಪರೀಕ್ಷೆಗಾಗಿ ಸಂಗ್ರಹಿಸಿದ್ದರು. ಈ ಮಾದರಿಯನ್ನು ಮೊದಲಿಗೆ ಉತ್ತರಾಖಂಡದ ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅಲ್ಲಿಂದ ಬಂದ ವರದಿಯಲ್ಲಿ ತುಪ್ಪವು ಕಳಪೆ ಗುಣಮಟ್ಟದ್ದಾಗಿದ್ದು, ಆರೋಗ್ಯಕ್ಕೆ
ಹಾನಿಕಾರಕವಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಯಿತು.ಇನ್ನು ಈ ವರದಿಯ ಆಧಾರದ ಮೇಲೆ ಇಲಾಖೆ 2021ರಲ್ಲಿ ಪತಂಜಲಿಗೆ ನೋಟಿಸ್ ನೀಡಿತು. ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದ್ದ
ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದಿತ್ತು.ನಂತರ ಪತಂಜಲಿ ಅಧಿಕಾರಿಗಳು ಮರುಪರೀಕ್ಷೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. 2021ರ
ಅಕ್ಟೋಬರ್ನಲ್ಲಿ ಗಾಜಿಯಾಬಾದ್ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ನಡೆದಿದ್ದು, ನವೆಂಬರ್ 26ರಂದು ಬಂದ ವರದಿಯಲ್ಲಿಯೂ ತುಪ್ಪವು ಆಹಾರ ಸುರಕ್ಷತಾ ಮಾನದಂಡಗಳಲ್ಲಿ ಮತ್ತೆ ವಿಫಲವಾಗಿದೆ ಎಂದು
ದೃಢಪಡಿಸಲಾಯಿತು. ಎರಡು ಪ್ರಯೋಗಾಲಯಗಳ ವರದಿ ಒಂದೇ ರೀತಿಯದ್ದಾಗಿರುವುದು ಕಳಪೆ ಗುಣಮಟ್ಟದ ಆರೋಪವನ್ನು ಇನ್ನಷ್ಟು ಗಂಭೀರಗೊಳಿಸಿತು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು
ಪಿಥೋರಗಢದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ದಾಖಲಿಸಿದರು. ಇನ್ನು ಕೆಲ ದಿನಗಳ ಹಿಂದಷ್ಟೇ ತೀರ್ಪು ಹೊರಬಿದ್ದಾಗ, ಎಡಿಎಂ (ADM) ಯೋಗೇಂದ್ರ ಸಿಂಗ್ ಅವರು ಎಲ್ಲಾ ದಾಖಲೆಗಳು
ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿ ಮೂವರು ಆರೋಪಿಗಳ ಮೇಲೂ ದಂಡ ವಿಧಿಸಿದರು. ಇದರಲ್ಲಿ ಮುಖ್ಯವಾಗಿ ಪತಂಜಲಿ ಆಯುರ್ವೇದ ಲಿಮಿಟೆಡ್ಗೆ 1 ಲಕ್ಷ ರೂ. ದಂಡ, ಪಿಥೋರಗಢದ ಧಾರ್ಚುಲಾ ರಸ್ತೆಯ ವಿತರಕ
‘ಬ್ರಹ್ಮ್ ಆಕ್ಸೆಸರೀಸ್’ಗೆ (Brahma Accessories) 25,000 ರೂ. ದಂಡ ಮತ್ತು ಚಿಲ್ಲರೆ ವ್ಯಾಪಾರಿ ಕರಣ್ ಜನರಲ್ ಸ್ಟೋರ್ಗೆ 15,000 ರೂ. ದಂಡ ವಿಧಿಸಲಾಗಿದೆ. ರಾಷ್ಟ್ರಪ್ರಸಿದ್ಧ ಬ್ರ್ಯಾಂಡ್ಗಳಿಗೂ ಆಹಾರ
ಗುಣಮಟ್ಟದ ಕಾನೂನು ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ ಎಂಬ ದೃಢ ಸಂದೇಶವನ್ನು ಈ ತೀರ್ಪು ಸಾರ್ವಜನಿಕರಿಗೆ ನೀಡಿದೆ. ಈ ಪ್ರಕರಣದ ಹಿನ್ನೆಲೆ ಹಾಗೂ ತೀರ್ಪಿನ ಮಹತ್ವವನ್ನು ವಿವರಿಸಿದ ಆಹಾರ ಸುರಕ್ಷತಾ
ಅಧಿಕಾರಿ ದಿಲೀಪ್ ಜೈನ್ (Jain) ಅವರು ಗ್ರಾಹಕರ ಕೈಗೆ ತಲುಪುವ ಆಹಾರ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ಕಲಬೆರಕೆ ಇರುವಂತಿಲ್ಲ. ಬ್ರ್ಯಾಂಡ್ ದೊಡ್ಡದಿದೆಯೇ, ಹೆಸರು ಇದ್ದಿದೆಯೇ ಎಂಬುದಕ್ಕಿಂತ ಆಹಾರ
ಸುರಕ್ಷತೆ ಮುಖ್ಯ. ಇದು ಕಂಪನಿಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ, ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಇರುವ ವಿವಾದಗಳ ನಡುವೆ ಈ ತೀರ್ಪು ಹೊರಬಿದ್ದಿರುವುದು
ಪತಂಜಲಿ ಉತ್ಪನ್ನ ಬಳಸುತ್ತಿದ್ದ ಗ್ರಾಹಕರು ಮುಂದಿನ ದಿನಗಳಲ್ಲಿ ಬಳಸಲು (Patanjali ghee fails quality test) ಮತ್ತಷ್ಟು ಯೋಚಿಸುವಂತಾಗಿದೆ.
ಇದನ್ನು ಓದಿ : ಇನ್ಮುಂದೆ ಪ್ರೌಢಶಾಲೆಗೆ PUC ಉಪನ್ಯಾಸಕರಿಂದ ಪಾಠ: ನಿಯಮ ತಿದ್ದುಪಡಿ ತರಲು ಪ್ರಸ್ತಾವನೆ