ಸರ್ದಾರ್ ವಲ್ಲಭಾಯ್ ಪಟೇಲರು ವೃತ್ತಿಯಲ್ಲಿ ವಕೀಲರಾಗಿದ್ದರು. ಒಮ್ಮೆ 46 ಜನ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ವಾದ ಮಂಡಿಸುತ್ತಿರುವಾಗ, ಅವರ ಧರ್ಮಪತ್ನಿಯ ನಿಧನದ ವಾರ್ತೆ ಸಹಾಯಕ ನೀಡುವ ಚೀಟಿಯ ಮೂಲಕ ತಿಳಿಯುತ್ತದೆ. ಅದನ್ನು ತನ್ನಲ್ಲಿಯೇ ಇಟ್ಟುಕೊಂಡು ಭಾವನಾತ್ಮಕವಾಗಿ ಕುಗ್ಗದೇ ವಾದವನ್ನು ಮುಂದುವರೆಸುತ್ತಿರುತ್ತಾರೆ. ಮಧ್ಯಾಹ್ನದ ಊಟದ ವೇಳೆಗೆ ಜಡ್ಜ್ ಇವರನ್ನು ಕರೆದು ಪ್ರಶ್ನಿಸುತ್ತಾರೆ. ನೀನು ವಾದ ಮಂಡಿಸುವ ಸಂದರ್ಭದಲ್ಲಿ ನಿಮಗೊಂದು ಸಂದೇಶ ಬಂದಿರುವುದನ್ನು ನಾನು ನೋಡಿದ್ದೇನೆ ಏನದು ? ಎಂದು ಕೇಳಿದರು. ಆಗ ಪಟೇಲರು ಶಾಂತ ರೀತಿಯಲ್ಲಿಯೇ ಉತ್ತರಿಸಿದರು, ನನ್ನ ಹೆಂಡತಿ ತೀರಿದ್ದಾಳೆ ಎಂದು. ಆ ಶಾಂತತೆ ಮತ್ತು ಗಟ್ಟಿ ಮನಸ್ಸನ್ನು ಕಂಡ ನ್ಯಾಯಾಧೀಶ, ಆಘಾತ ಮ್ತತ್ತು ಆಶ್ಚರ್ಯದಿಂದ, ಇಲ್ಲೇನು ಮಾಡುತ್ತಿದ್ದೀರಿ? ಮೊದಲು ಮನೆಗೆ ಹೋಗಿ ಎಂದರು. ಆಗ ಪಟೇಲರು ನಾನು ಮನೆಗೆ ಹೋದರು ನನ್ನ ಹೆಂಡತಿಯನ್ನು ಜೀವಂತವಾಗಿ ಮರಳಿ ಪಡೆಯಲಾರೆ, ಆದರೆ ಇಲ್ಲಿ 46 ಜನರ ಜೀವನವನ್ನಾದರೂ ಉಳಿಸಬಹುದಲ್ಲವೇ? ಎಂದರು.
ಆ ನ್ಯಾಯಾಧೀಶ ಒಬ್ಬ ಬ್ರಿಟೀಷ್ ಆಗಿದ್ದ, ಆ ಎಲ್ಲಾ ೪೬ ಜನರನ್ನು ಬಿಡುಗಡೆ ಮಾಡುವುದಕ್ಕೆ ಆದೇಶಿಸಿದ. ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಅವರ ಗಟ್ಟಿ ವ್ಯಕ್ತಿತ್ವ. ಇವರ ದೃಢ ಸಂಕಲ್ಪ, ಅಚಲ ಹೋರಾಟದ ಮನೋಸ್ಥಿತಿಯಿಂದಲೇ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತಿತ್ತು.
ಇಂದು ಉಕ್ಕಿನ ಮನಸ್ಸಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 145 ನೇ ಜನ್ಮದಿನೋತ್ಸವ. ಅವರ ನುಡಿಯಲ್ಲಿ ಸ್ಪಷ್ಟತೆ ಹಾಗೂ ನಡೆಯಲ್ಲಿ ದೃಢತೆ ಇತ್ತು. ಹಾಗಾಗಿಯೆ ಅವರು ಈ ಮಾತನಾಡಿದ್ದಾರೆ… ”ಸಾಮೂಹಿಕ ಪರಿಶ್ರಮದ ಮೂಲಕ ನಾವು ಈ ದೇಶವನ್ನು ಹೊಸ ಔನ್ನತ್ಯಕ್ಕೆ ಒಯ್ಯಬಹುದು; ಐಕ್ಯತೆಯ ಕೊರತೆಯಿಂದ ಹೊಸ ದುರಂತಗಳು ನಮಗೆ ಎದುರಾಗಬಹುದು” ಎಂದು.
ಪಟೇಲರ ಕಾರ್ಯವೈಖರಿಯನ್ನು ಪ್ರಶಂಸಿಸುತ್ತ ಲಾರ್ಡ್ ಮೌಂಟ್ ಬ್ಯಾಟನ್ ಅವರು ಒಂದೆಡೆ ಹೇಳುತ್ತಾರೆ: ”ಇದುವರೆಗೆ ಪ್ರಸಕ್ತ ಸರಕಾರದ ಅತ್ಯಂತ ಮುಖ್ಯ ಸಾಧನೆ ಎಂದರೆ ರಾಜಾಡಳಿತದ ಪ್ರಾಂತ್ಯಗಳನ್ನು ಒಕ್ಕೂಟದೊಳಕ್ಕೆ ಸೇರ್ಪಡೆಗೊಳಿಸಿಕೊಂಡದ್ದು. ಇದರಲ್ಲಿ ಸೋತಿದ್ದರೆ ಫಲಿತಾಂಶ ಸರ್ವನಾಶಕರವಾಗಿರುತ್ತಿತ್ತು. ರಾಜ್ಯಗಳನ್ನು ಒಂದೆಡೆ ಸೇರಿಸುವ ಚಾಕಚಕ್ಯತೆಯ ರಾಜಕೀಯ ನೀತಿಗಿಂತ ಮಿಗಿಲಾದದ್ದು ಇನ್ಯಾವುದೂ ಇಲ್ಲ” ಎಂದು.
ಅಂದ್ರೆ ಛಿದ್ರ ಛಿದ್ರವಾಗಿ ಹೋಗಬೇಕಾಗಿದ್ದ ಭಾರತವನ್ನು ಒಗ್ಗೂಡಿಸಿದ ಪಟೇಲರ ಪರಿಶ್ರಮ ಹಾಗೂ ಸಾಧನೆಯೇ ಅಪೂರ್ವ. ಇದು ಒಬ್ಬ ಅಚಲ ವ್ಯಕ್ತಿತ್ವದ ವ್ಯಕ್ತಿಯಿಂದ ಮಾತ್ರ ಮಾಡಲು ಸಾಧ್ಯ. ಅವರ ಹೆಸರಿನ ಜೊತೆ ಉಕ್ಕಿನ ಮನುಷ್ಯ ಅನ್ನೋ ಪದ ಸೇರಿರೋ ಹಿಂದೆ ಸಾಕಷ್ಟು ಕುತೂಹಲಕಾರಿ ಘಟನೆಗಳಿವೆ.
ಕಟು ನಿರ್ಧಾರ ಸರ್ದಾರರ ಜೀವನದ ಗುಟ್ಟು:
ಅಲ್ಲದೇ ಅವರು ತನ್ನ ಸಣ್ಣ ವಯಸ್ಸಿನಿಂದಲೂ ಪಟೇಲರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಅತ್ಯಂತ ಪ್ರಬಲ ವ್ಯಕ್ತಿಯಾಗಿದ್ದವರು. ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ತಮ್ಮ ಸಣ್ಣ ವಯಸ್ಸಿನ ಘಟನೆ ಬಿಂಬಿಸುತ್ತದೆ. ಆ ಘಟನೆ ಏನೆಂದರೆ ಗ್ರಾಮಗಳಲ್ಲಿ ಒಂದು ಚಿಕಿತ್ಸಾ ಪದ್ಧತಿ ಇತ್ತು. ಅದೇನೆಂದರೆ ರಾಡ್ನ್ನು ಬಿಸಿ ಮಾಡಿ ಕಂಕುಳಿನಲ್ಲಿ ಆ ರಾಡ್ನ ಬಿಸಿ ಮುಟ್ಟಿಸುತ್ತಿದ್ದರು. ಇದು ಅಲ್ಲಿನ ಪದ್ಧತಿಯಾಗಿತ್ತು. ಹೀಗೆ ಆ ಪದ್ಧತಿಯನ್ನು ಆಚರಿಸಲು ಗ್ರಾಮದ ಹೊರಗೆ ಈ ಚಿಕಿತ್ಸೆ ನೀಡುವ ಮನುಷ್ಯನ ಬಳಿ ಪಟೇಲರು ಹೋದಾಗ ಪಟೇಲರಿಗಿನ್ನು ಚಿಕ್ಕ ವಯಸ್ಸು ಆದ್ದರಿಂದ ಈ ಪದ್ಧತಿಯನ್ನು ಮಾಡಲು ಆ ಚಿಕಿತ್ಸಕ ಹಿಂಜರಿಯುತ್ತಾನೆ. ಆಗ ಪಟೇಲರು ಆ ಚಿಕಿತ್ಸಕನಿಗೆ ಹೇಳುತ್ತಾರೆ, ಬೇಗ ಆ ಬಿಸಿ ಮಾಡಿದ ರಾಡ್ನಿಂದ ಬೇಗ ನನಗೆ ಚಿಕಿತ್ಸೆ ನೀಡು ಇಲ್ಲವಾದರೆ ಆ ರಾಡ್ ತಣ್ಣಗಾಗುತ್ತದೆ. ಅದರ ಬಿಸಿ ಇಳಿಮುಖವಾಗುತ್ತದೆ ಎಂದು. ಆಗಲೂ ಚಿಕಿತ್ಸಕ ಈ ಚಿಕಿತ್ಸೆಯನ್ನು ನೀಡಲು ನಿರಾಕರಿಸುತ್ತಾನೆ. ಆ ಸಂದರ್ಭದಲ್ಲಿ ಅವರೇ ಸ್ವತಃ ಆ ರಾಡನ್ನು ತೆಗೆದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಒಂದು ಹನಿ ಕಣ್ಣೀರು ಬರುವುದಿಲ್ಲ. ಇದನ್ನು ಗಮನಿಸಿದ ಗ್ರಾಮಸ್ಥರು ಬಾಲಕನ ದೈರ್ಯವನ್ನು ಕಂಡು ದಿಗ್ಭ್ರಮೆಗೊಳ್ಳುತ್ತಾರೆ.
ಬಹುಮುಖ ವ್ಯಕ್ತಿತ್ವದ ಪಟೇಲರು:
ಅವರು ದೊಡ್ಡ ರಾಜಕೀಯ ನಾಯಕ, ಅನನ್ಯ ಸಂಘಟಕ, ನಿಪುಣ ಆಡಳಿತಗಾರ ಹಾಗೂ ಕುಶಲಿ ರಾಯಭಾರಿ. ಮಹಾತ್ಮರ ಪ್ರಭಾವಕ್ಕೆ ಒಳಗಾದ ಬಳಿಕ ಅವರು ಮಹಾತ್ಮರಿಗೆ ನಿಷ್ಠ ಬೆಂಬಲಿಗನಾದರು; ನಾನಾ ಕಡೆ ಚಳವಳಿ ಹೋರಾಟಗಳನ್ನು ಸಂಘಟಿಸಿದರು. ಖೇಡಾ, ಬಾರ್ದೋಲಿ ಮುತಾದೆಡೆ ಕರ ನಿರಾಕರಣ ಚಳವಳಿಯನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿದರು. ಇದರಿಂದ ‘ಸರ್ದಾರ್’ ಎಂಬ ಬಿರುದು ಪಡೆದರು. ಹಿಂದಕ್ಕೆ ಹೆಜ್ಜೆಯಿಡದ ಅವರ ಗಟ್ಟಿತನದಿಂದಾಗಿ ಈ ಸನ್ನ್ನಿವೇಶಗಳಲ್ಲಿ ಹೋರಾಟಗಾರರ ಮುಂದೆ ಬ್ರಿಟಿಷ್ ಆಡಳಿತವೇ ಹಿಂದೆಗೆಯಬೇಕಾಯಿತು. ಭಾರತದ ನಾಗರಿಕ ಸೇವಾ ವ್ಯವಸ್ಥೆಯ ಉಕ್ಕಿನ ಚೌಕಟ್ಟಿನ ಹಿಂದಿರುವ ವಾಸ್ತುಶಿಲ್ಪಿ ಕೂಡ ಈ ಉಕ್ಕಿನ ವ್ಯಕ್ತಿಯೇ. ದೇಶದ ಏಕತೆ, ಐಕಮತ್ಯದ ಬಂಧವನ್ನು ಬೆಸೆಯುವ ನಾಗರಿಕ ಸೇವಾ ವ್ಯವಸ್ಥೆ ಭಾರತದ್ದಾಗಿದೆ.
ಪಟೇಲರ ಔದಾರ್ಯ, ತ್ಯಾಗಮಯಿ ಭಾವ, ಘನತೆಗಳನ್ನು ಕಾಣಿಸುವ ಇನ್ನೊಂದು ಘಟನೆಯನ್ನು ನೆನೆಯಲೇ ಬೇಕು. 1946ರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಹೆಚ್ಚಿನ ಕಾಂಗ್ರೆಸ್ ಸದಸ್ಯರ ಬೆಂಬಲವೂ ಪಟೇಲರಿಗೇ ಇತ್ತು. ಆದರೆ ಮಹಾತ್ಮ ಗಾಂಧಿಯವರ ಮಾತುಗಳಿಗೆ ಗೌರವ ನೀಡಿ ತಮ್ಮ ಅಭ್ಯರ್ಥಿತನದಿಂದ ಹಿಂದೆಗೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದವರು ಮುಂದೆ ದೇಶದ ಪ್ರಧಾನಿಯಾಗುವುದು ಖಚಿತವಾಗಿತ್ತು. ಆದರೆ ದೇಶದ ಹಿತಕ್ಕಾಗಿ ಪಟೇಲ್ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿದರು.
ಪಟೇಲರು ತಮ್ಮ ತಾಯಿನೆಲವನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಹೇಳಿದ ಈ ಮಾತುಗಳಿಂದ ತಿಳಿಯಬಹುದು: ”ಒಬ್ಬ ವ್ಯಕ್ತಿಯ ಆಯ್ಕೆಯಿಂದ ಆತನನ್ನು ಅಳೆಯಬಹುದು. ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು, ತನ್ನ ತಾಯ್ನೆಲಕ್ಕಾಗಿ ಬದುಕುವುದು; ಇನ್ನೊಂದು, ತನಗಾಗಿ ಜೀವಿಸುವುದು. ಸರ್ದಾರ್ ತಮ್ಮ ದೇಶವನ್ನು ಆಯ್ಕೆ ಮಾಡಿಕೊಂಡರು.”
ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದ ಆಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಉಕ್ಕಿನ ಮನುಷ್ಯ ರೆಂದೇ ಪ್ರಸಿದ್ದಿಯಾದರು. ಪಟೇಲರಿಗೆ 1991 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಗುಜರಾತಿನ ‘ಸರ್ದಾರ್’ ಎಂಬ ಬಿರುದು ನೀಡಿ ಗೌರವಿಸಲಾಯಿತು.
- ಶರಧಿ ಆರ್. ಫಡ್ಕೆ