ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆ, ಫಲವುಣ್ಣುವ ಸಮಯದಲ್ಲಿ ನಾಶವಾಗಿ ಹೋಗಿದೆ. ರಾತ್ರಿ ಬೆಳಗಾಗೋದ್ರೋಳಗೆ ಎಕರೆಗಟ್ಟಲೆ ಬೆಳೆ ನೆಲಸಮವಾಗಿವೆ. ಜೋಳದ ಬೆಳೆ ಹಾಳಾಗಿ ಹೋಗಿವೆ. ಎಕರೆಗಟ್ಟಲೆ ಬೆಳೆ ಈ ರೀತಿ ಹಾಳಾಗಲು ಕಾರಣ ಏನು ಗೊತ್ತಾ? ಹಂದಿಗಳ ಕಾಟ. ಯಸ್, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಮಂದಿ ಕಾಡು ಹಂದಿಗಳ ಉಪಟಳದಿಂದ ಕಣ್ಣೀರು ಸುರಿಸುವ ಹಾಗಾಗಿದೆ.
ಇವರು ಮೊದಿನಸಾಬ ಬುಡೇಸಾಬ ಕಾಗದಗಾರ. ಇವರು ಒಂದೂವರೆ ಎಕರೆಯಲ್ಲಿ ಬೆಳೆದ ಮೆಕ್ಕೆ ಜೋಳವನ್ನು ಕಾಡು ಹಂದಿ ಸರ್ವನಾಶ ಮಾಡಿದೆ. ಇದು ಇವರೊಬ್ಬ ರೈತರ ಕತೆಯಲ್ಲ ಈ ಗ್ರಾಮದ ಹತ್ತಾರು ರೈತರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಇದು ಒಂದೆರೆಡು ದಿನಗಳ ಕತೆಯಲ್ಲ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹಂದಿಗಳು ಬೆಳೆಯನ್ನು ನಾಶಪಡಿಸುತ್ತಿವೆ. ಇದರಿಂದ ರೈತರಿಗೆ ಭಾರೀ ನಷ್ಟವುಂಟಾಗುತ್ತಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಈ ರೀತಿ ಕಣ್ಣಾರೆ ನಾಶ ಆಗುತ್ತಿರುವುದನ್ನು ಕಂಡು ಮರುಗುವಂತಾಗಿದೆ ಅನ್ನೋದು ಅನ್ನದಾತನ ಅಳಲು.
ಹಂದಿಗಳ ಕಾಟದಿಂದ ನೊಂದ ರೈತರು ಅರಣ್ಯ ಇಲಾಖೆಗೆ ದೂರು ನೀಡುತ್ತಲೇ ಇದ್ದಾರೆ. ಆದ್ರೆ ಈ ವರೆಗೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ರೈತರ ನೋವು ಆಲಿಸಿಲ್ಲ. ಪರಿಹಾರ ನೀಡಿಲ್ಲ ಅಂತಾರೆ ಇವರು. ಹಂದಿ ಕಾಟದಿಂದ ಈ ಗ್ರಾಮದ ಮಂದಿ ಬೆಳೆ ಬೆಳೆಯಲು ಭಯ ಬೀಳುವ ಪರಿಸ್ಥಿತಿ ಬಂದಿದೆ. ಹಾಗಾಗಿ ಅರಣ್ಯ ಇಲಾಖೆಯವರು ಆದಷ್ಟು ಬೇಗ ಎಚ್ಚೆತ್ತು ಈ ರೈತರಿಗೆ ಪರಿಹಾರ ಒದಗಿಸಬೇಕು.
ಗದಗದಿಂದ ಮೋಬುಸಾಬು ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್