ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಯುದ್ದದ ಬದಲು ಮಾತುಕತೆ ಮೂಲಕ ಉಕ್ರೇನ್ ನಡುವಿನ ಸಮಸ್ಯೆಯನ್ನು ಬಗ್ಗೆ ಹರಿಸುವಂತೆ ತಿಳಿಸಿದ್ದಾರೆ. ಉಕ್ರೇನ್ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿಗೆ ವಿವರಿಸಿದರು ಎನ್ನಲಾಗಿದೆ.
ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಸಂವಾದದ ಮೂಲಕ ಮಾತ್ರ ಪರಿಹರಿಸಬಹುದು ಎಂಬ ತಮ್ಮ ದೀರ್ಘಕಾಲದ ನಂಬಿಕೆಯನ್ನು ಈ ವೇಳೆ ಪ್ರಧಾನಿ ಪುನರುಚ್ಚರಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ಪುಟಿನ್ ಅವರಿಗೆ ಮನವಿ ಮಾಡಿದರು ಮತ್ತು ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಯಲಿ ಎಂದು ಕರೆ ನೀಡಿದರು.
ಪ್ರಧಾನಿ ಮೋದಿ ಅವರು ಉಕ್ರೇನ್ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭಾರತ ಹೊಂದಿರುವ ಕಳವಳಗಳ ಬಗ್ಗೆ ರಷ್ಯಾದ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಭಾರತೀಯರ ಸುರಕ್ಷತೆ ಮತ್ತು ಭಾರತಕ್ಕೆ ಮರಳಲು ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ತಮ್ಮ ಅಧಿಕಾರಿಗಳು ಮತ್ತು ರಾಜತಾಂತ್ರಿಕ ತಂಡಗಳು ಈ ವಿಷಯಗಳ ಬಗ್ಗೆ ನಿಯಮಿತ ಸಂಪರ್ಕಗಳನ್ನು ಮುಂದುವರಿಸುವುದಕ್ಕೆ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದ್ದಂತೆ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ತನ್ನ ಮೂರನೇ ಸಲಹೆಯನ್ನು ಬಿಡುಗಡೆ ಮಾಡಿದೆ.
ಬಾಂಬ್ ಶೆಲ್ಟರ್ಗಳಿಗೆ ತೆರಳುವಂತೆ ಭಾರತೀಯರಿಗೆ ಸೂಚನೆ : “ಕೆಲವು ಸ್ಥಳಗಳಲ್ಲಿ ಏರ್ ಸೈರನ್ಗಳು/ಬಾಂಬ್ ವಾರ್ನಿಂಗ್ಗಳು ಕೇಳುತ್ತಿವೆ ಎಂದು ನಮಗೆ ತಿಳಿದಿದೆ. ನೀವು ಅಂತಹ ಪರಿಸ್ಥಿತಿಯನ್ನು ಎದುರಿಸಿದರೆ, ಗೂಗಲ್ ನಕ್ಷೆಗಳು ಹತ್ತಿರದ ಬಾಂಬ್ ಶೆಲ್ಟರ್ಗಳ ಪಟ್ಟಿಯನ್ನು ಹೊಂದಿದೆ, ಅವುಗಳಲ್ಲಿ ಹಲವು ಭೂಗತ ಮೆಟ್ರೋಗಳಲ್ಲಿವೆ. ಅಲ್ಲಿಗೆ ತೆರಳಿರಿ” ಎಂದು ರಾಯಭಾರ ಕಚೇರಿ ತಿಳಿಸಿದೆ. ಕೈವ್ನಲ್ಲಿರುವವರಿಗೆ, ಕೈವ್ ನಗರ ಆಡಳಿತದ ಅಧಿಕೃತ ಲಿಂಕ್ ಅನ್ನು ಕೂಡ ರಾಯಭಾರ ಕಚೇರಿ ನೀಡಿದೆ.
ಉಕ್ರೇನ್ನಲ್ಲಿ ಸುಮಾರು 18,000 ಭಾರತೀಯರಿದ್ದಾರೆ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಸ್ಥಳಾಂತರಿಸಲು ಕಳುಹಿಸಲಾದ ಏರ್ ಇಂಡಿಯಾ ವಿಮಾನವು ಬೆಳಿಗ್ಗೆ 7:30 ಕ್ಕೆ ಹೊರಟಿತು ಆದರೆ ವಾಣಿಜ್ಯ ವಿಮಾನಗಳಿಗಾಗಿ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ಹಿನ್ನೆಲೆಯಲ್ಲಿ ಹಿಂತಿರುಗಬೇಕಾಯಿತು.
“ಉಕ್ರೇನ್ನಲ್ಲಿ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ವಿಮಾನಗಳ ಮೂಲಕ ಭಾರತೀಯರನ್ನು ಕರೆತರುವ ಕ್ರಮಗಳನ್ನು ನಾವು ನಿಲ್ಲಿಸಿದ್ದೇವೆ. ಭಾರತೀಯರನ್ನು ಮರಳಿ ಕರೆತರಲು ನಾವು ಪರ್ಯಾಯ ಕ್ರಮಗಳನ್ನು ಯೋಜಿಸುತ್ತಿದ್ದೇವೆ. ಭಾರತೀಯರಿಗೆ ಸಹಾಯ ಮಾಡಲು ಈ ಪ್ರದೇಶಕ್ಕೆ ಹೆಚ್ಚಿನ ರಾಜತಾಂತ್ರಿಕರನ್ನು ಕಳುಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ” ಎಂದು ಕಿರಿಯ ವಿದೇಶಾಂಗ ಸಚಿವ ವಿ ಮುರಳೀಧರನ್ ಹೇಳಿದ್ದಾರೆ.
“ನಾನು ಉಕ್ರೇನ್ನಲ್ಲಿರುವ ಮಲಯಾಳಿ ವಿದ್ಯಾರ್ಥಿಗಳೊಂದಿಗೆ ಫೋನ್ನಲ್ಲಿ ಮಾತನಾಡಿದ್ದೇನೆ. ಉಕ್ರೇನ್ನ ದಕ್ಷಿಣ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳು ನಮಗೆ ಆಹಾರ, ನೀರು ಮತ್ತು ವಿದ್ಯುತ್ ಸಿಗುತ್ತಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ಗಾಬರಿಯಾಗಬಾರದು. ನಮ್ಮ ಸರ್ಕಾರ ಇರಾಕ್ನಂತಹ ಸ್ಥಳಗಳಿಂದ ಭಾರತೀಯರನ್ನು ಕರೆತಂದಿದೆ. ಕೇಂದ್ರ ಸರ್ಕಾರಕ್ಕೆ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ನಿಯಂತ್ರಣ ಕೊಠಡಿಯನ್ನು ವಿಸ್ತರಿಸಲಾಗಿದೆ, ಹೆಚ್ಚಿನ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ”ಎಂದಿದ್ದಾರೆ