ಯಸ್ ಇವರೆಲ್ಲರ ಬೇಡಿಕೆ ಒಂದೇ ಅದುವೇ ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತವಾದ ಆಸ್ಪತ್ರೆ ಬೇಕು ಅಂತ.
ಅದಕ್ಕಾಗಿಯೇ ಇವರೆಲ್ಲಾ ಇವತ್ತು ಬೀದಿಗಿಳಿದು, ಇಷ್ಟೊಂದು ಆಕ್ರೋಶಿತರಾಗಿ ಪ್ರತಿಭಟನೆ ನಡೆಸುತ್ತಿರುವುದು. ಅದಕ್ಕಾಗಿಯೇ ಇವರು ಈ ರೀತಿ ರೋಗಿಯನ್ನು ಇಟ್ಟುಕೊಂಡು ವಿನೂತನವಾಗಿ ಅಣುಕು ಪ್ರದರ್ಶನ ಮಾಡುತ್ತಿರುವುದು.
ಕರಾವಳಿ ಜಿಲ್ಲೆ ಉತ್ತರ ಕನ್ನಡ ನಮ್ಮ ರಾಜ್ಯದ ಅತೀ ದೊಡ್ಡ ಜಿಲ್ಲೆ ಎನಿಸಿಕೊಂಡಿದೆ. ಇದು ನೈಸರ್ಗಿಕವಾಗಿ ಸಂಪತ್ಭರಿತವಾದ ಜಿಲ್ಲೆ. ಆದ್ರೆ ದುರಂತ ನೋಡಿ ಈ ಜಿಲ್ಲೆಯಲ್ಲಿ ಇವತ್ತಿಗೂ ಒಂದು ಸುಸಜ್ಜಿತವಾದ ಆಸ್ಪತ್ರೆ ಇಲ್ಲ. ಜನ ಇಲ್ಲಿ ಗಂಭೀರ ಕಾಯಿಲೆಗೆ ತುತ್ತಾದ್ರೆ ಪಕ್ಕದ ಮಂಗಳೂರಿಗೋ, ಉಡುಪಿ ಜಿಲ್ಲೆಗೋ ಹೋಗಬೇಕು.
ಇನ್ನು ಈ ಜಿಲ್ಲೆ ನೆರೆಯ ಮಹಾರಾಷ್ಟ್ರ, ಗೋವಾಕ್ಕೆ ಸಂಪರ್ಕ ಕೊಂಡಿ. ಹಾಗಾಗಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅಪಘಾತಗಳು ನಡೆಯಿತ್ತಿರುತ್ತವೆ. ಅಪಘಾತ ಸಂಭವಿಸಿದ್ರೂ ಇಲ್ಲಿ ಸೂಕ್ತ ಚಿಕಿತ್ಸೆ ಕೊಡಲು ಸುಸಜ್ಜಿತ ಆಸ್ಪತ್ರೆಗಳೇ ಇಲ್ಲ. ಇದರಿಂದ ಅದೆಷ್ಟೋ ಜನ ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಅನ್ನೋದು ಸ್ಥಳೀಯರ ದೂರು
ಈ ಜಿಲ್ಲೆಯ ಸಂಸದರಾದ ಅನಂತ್ ಕುಮಾರ್ ಹೆಗ್ಡೆಯವರು ಎರಡು ದಶಕಗಳಿಂದ ಈ ಜಿಲ್ಲೆಯನ್ನು ಆಳುತ್ತಿದ್ದಾರೆ. ಆದ್ರೆ ಇವತ್ತಿನ ವರೆಗೆ ಇಲ್ಲೊಂದು ಉನ್ನತಮಟ್ಟದ ಆಸ್ಪತ್ರೆ ನಿರ್ಮಿಸಿಕೊಡಲು ಆಗಲಿಲ್ಲ ಅನ್ನೋದು ಸಾರ್ವಜನಿಕರ ಆರೋಪ.
ಸುಸಜ್ಜಿತ ಆಸ್ಪತ್ರೆ ನಿರ್ಮಿಸಿಕೊಡಲು ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನಿಯವರೆಗೆ ಮನವಿ ಕೊಟ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಅದಕ್ಕಾಗಿ ಜನ ಬೀದಿಗಿಳಿಯಬೇಕಾಯಿತು ಅನ್ನೋದು ಹೋರಾಟಗಾರರ ವಾದ.
ಜನ ಆಕ್ರೋಶಿತರಾಗಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗೆ ಇನ್ನು ಉಗ್ರ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಂಡು ಉತ್ತರ ಕನ್ನಡಕ್ಕೆ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡದಿದ್ದರೆ ಭಾರೀ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಉನ್ನತ ಕನ್ನಡದ ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್