ಬೆಂಗಳೂರು, ಏ. 27: ಕೋವಿಡ್ನಿಂದ ಮೃತಪಟ್ಟವರ ಕುಟುಂಬದ ಸದಸ್ಯರು ಆಸ್ಪತ್ರೆಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ʻಆಸ್ಪತ್ರೆಗಳಲ್ಲಿ ಪಾರದರ್ಶನ ವ್ಯವಸ್ಥೆ ಇರಲಿʼ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟ ಜಗ್ಗೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ʻಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ. ಸಾರ್ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾದ 2, 3 ದಿನಕ್ಕೆ ಸಾವು ಸಂಭವಿಸುತ್ತಿದೆ. ಇದು ನನ್ನ ಅನುಭವಕ್ಕೂ ಬಂದಿದೆ. ಯಾವ ಚಿಕಿತ್ಸೆ ನೀಡುತ್ತಾರೆ ಎಂಬುದು ಕುಟುಂಬದವರಿಗೆ ತಿಳಿಯದು. ಸಾವಾಗಿದೆ ಎಂದು ತಿಳಿಸುತ್ತಾರೆ ಮುಖಸಹಿತ ನೋಡಲಾಗದು.
ಕೆಲ ಸಿಬ್ಬಂದಿ ಹೊರತುಪಡಿಸಿ ತಜ್ಞರು ವೈಯಕ್ತಿಕವಾಗಿ ವಿಷಯ ತಿಳಿಯಲು ಸಿಗುವುದಿಲ್ಲ. ಪ್ರತಿ ರೋಗಿಯ ಮನೆಯವರಿಗೆ ರೋಗಿಯನ್ನು ದೂರದಿಂದ ನೋಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುವುದಿಲ್ಲ. ಪ್ರತಿ ಕೋವಿಡ್ ರೋಗಿಗೆ ಇಂತಹದೇ ಚಿಕಿತ್ಸೆ ಮತ್ತು ಸ್ಕ್ಯಾನ್ಗಳು ಇರುತ್ತವೆ.
ಇದು ಯಾವುದು ಇಲ್ಲದೆ ದಾಖಲಿಸಿಕೊಂಡು, ನಂತರ ಯಾವ ವಿಷಯವನ್ನೂ ಹೊರಗೆ ತಿಳಿಸದೆ ರೋಗಿಯ ಸಾವಿನ ಜೊತೆ ಮನೆಯವರು ಸಾಯುವಂತೆ ಮಾಡುತ್ತಾರೆ. ಒಳ ಅರಿವಿರದವರು ಸರ್ಕಾರದ ಕಾರ್ಯ, ಶ್ರಮ, ದೂಷಣೆ ಮಾಡಿ ಸತ್ಯ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ!
ದಯಮಾಡಿ ರೋಗಿಯ ಚಿಕಿತ್ಸೆಯ ಬಗ್ಗೆ ಪಾರದರ್ಶಕ ವ್ಯವಸ್ಥೆ ಆಗಲಿ’ ಎಂದು ಸಿಎಂಗೆ ಮನವಿ ಮಾಡಿದ್ದಾರೆ.