ಬೆಂಗಳೂರು ನ 9 : ಕನ್ನಡ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿದ್ದ ಹಿನ್ನಲೆಯಲ್ಲಿ ಅಭಿಮಾನಿಗಳಿಗಾಗಿ ಡಾ. ರಾಜ್ಕುಮಾರ್ ಅವರ ಕುಟುಂಬಸ್ಥರು ಆಯೋಜಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮ ಅಂತ್ಯಗೊಂಡಿದ್ದು, 40 ಸಾವಿರಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ವೆಜ್ ಮತ್ತು ನಾನ್ ವೆಜ್ ಊಟ ಸವಿದರು. ಬೆಳಗ್ಗೆ 11.30 ರಿಂದ ಸಂಜೆ 4.30 ರವರೆಗೆ ನಿಂತರವಾಗಿ ಸತತ ಐದೂವರೆ ಗಂಟೆಗಳ ಕಾಲ ಅನ್ನ ಸಂತರ್ಪಣೆ ಮಾಡಲಾಯಿತು.
ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನರು ಅಗಮಿಸಿದ ಹಿನ್ನೆಲೆಯಲ್ಲಿ ಬಾಣಸಿಗರು ಹೆಚ್ಚುವರಿಯಾಗಿ 10 ಸಾವಿರ ಮಂದಿಗೆ ಘೀ ರೈಸ್, ಅನ್ನ ರಸಂ ತಯಾರಿಸಿ ಬಡಿಸಿದರು
ಅನ್ನಸಂತರ್ಪಣೆ ಬಳಿಕ ಮಾತನಾಡಿದ ಶಿವರಾಜ್ ಕುಮಾರ್ ಅವರು ‘ಅಪ್ಪು ಆಸೆಯಂತೆ ಇವತ್ತು ಅನ್ನದಾನ ಮಾಡಲಾಗಿದೆ. ಎಲ್ರೂ ಬಂದು ಊಟ ಮಾಡಿ ಆಶೀರ್ವಾದ ಮಾಡಿದ್ದೀರಾ. ನಿಮ್ಮ ಆಶೀರ್ವಾದ, ಪ್ರೀತಿ ನಮಗೆ ಬೇಕು. ಎಲ್ಲರಿಗೂ ತುಂಬಾ ಧನ್ಯವಾದಗಳು. ಪೊಲೀಸರು, ಮಾಧ್ಯಮಗಳು, ಅಡಿಗೆ ಮಾಡಿದವರು ಎಲ್ಲರಿಗೂ ಧನ್ಯವಾದಗಳು’ ಎಂದು ತಿಳಿಸಿದರು.
ರಾಘವೇಂದ್ರ ರಾಜ್ ಕುಮಾರ್ ಅವರು ಪೊಲೀಸರಿಗೆ ಧನ್ಯವಾದ ಹೇಳಿದ್ದು, ಇದನ್ನು ಪೊಲೀಸರು ಡ್ಯೂಟಿ ಅಂತ ಮಾಡಲಿಲ್ಲ. ಬ್ಯೂಟಿ ಅಂತ ಮಾಡಿದ್ರು. ಖರ್ಚು ನಾವು ಮಾಡಬಹುದು. ಆದರೆ ಇದು ಇಷ್ಟು ಅಚ್ಚುಕಟ್ಟಾಗಿ ನಡೆಯೋಗಕ್ಕೆ ಪೊಲೀಸರೇ ಕಾರಣ. ನಿಮಗೆ ಥ್ಯಾಂಕ್ಯೂ ಹೇಳೋಕೆ ಆಗೊಲ್ಲ. ನೀವು ತೋರಿಸಿದ ಪ್ರೀತಿಗೆ ನಾವು ಚಿರಋಣಿ ಎಂದು ತಿಳಿಸಿದ್ದಾರೆ.