ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ವಾಗ್ದಾಳಿ ಮುಂದುವರೆದಿದ್ದು, AAP ಮುಖ್ಯಸ್ಥನ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಬೀರ ಆರೋಪ ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಏನೇ ಆಗಲಿ, ಕಾಂಗ್ರೆಸ್ ನಾಯಕರೊಬ್ಬರು ಉಗ್ರನ ಮನೆಯಲ್ಲಿ ಕಾಣಿಸಿಕೊಳ್ಳುವುದು ಸಾಧ್ಯವೇ ಇಲ್ಲ. AAPಯ ಅತಿ ದೊಡ್ಡ ನಾಯಕರನ್ನು ಭಯೋತ್ಪಾದಕನೊಬ್ಬನ ಮನೆಯಲ್ಲಿ ಕಾಣಬಹುದಾಗಿದೆ. ಇದು ವಾಸ್ತವ ಎಂದು ಪಂಜಾಬ್ನ ಬರ್ನಾಲಾದಲ್ಲಿ ಪ್ರಚಾರ ಸಮಾವೇಶದ ವೇಳೆ ರಾಹುಲ್ ಗಾಂಧಿ ಹೇಳಿದರು.

2017ರ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ಮಾಜಿ ಖಲಿಸ್ತಾನಿ ಉಗ್ರನೊಬ್ಬನ ಮನೆಯಲ್ಲಿ ಕೇಜ್ರಿವಾಲ್ ಇಡೀ ರಾತ್ರಿ ಕಳೆದಿದ್ದ ಘಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಸರ್ಕಾರ ರಚಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿರುವ ಕೇಜ್ರಿವಾಲ್, ಅಧಿಕಾರ ಸಿಕ್ಕರೆ ರಾಜ್ಯವನ್ನು ಸುಟ್ಟು ಹಾಕುತ್ತಾರೆ ಎಂದು ಹೇಳಿದರು. ನಿಮಗೆ ಭರವಸೆಗಳನ್ನು ನೀಡುತ್ತಿರುವವರು, ‘ಒಂದು ಬಾರಿ ಅವಕಾಶ ನೀಡಿ’ ಎನ್ನುತ್ತಿರುವವರು, ಅವರು ಪಂಜಾಬ್ ಅನ್ನು ನಾಶ ಮಾಡುತ್ತಾರೆ. ಪಂಜಾಬ್ ಸುಟ್ಟು ಹೋಗುತ್ತದೆ. ನನ್ನ ಮಾತುಗಳನ್ನು ನೆನಪಿಡಿ ಎಂದು ಎಚ್ಚರಿಕೆ ನೀಡಿದರು.

ಬಡ ವ್ಯಕ್ತಿಯೊಬ್ಬನನ್ನು ಅಮರಿಂದರ್ ಸಿಂಗ್ ಅಪ್ಪಿಕೊಂಡಿದ್ದನ್ನು ಎಂದಾದರೂ ನೋಡಿದ್ದೀರಾ? ಅವರು ಹಾಗೆ ಮಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಅಮರಿಂದರ್ ಸಿಂಗ್ ಮತ್ತು ಬಿಜೆಪಿ ನಡುವೆ ಸಂಬಂಧ ಇದೆ ಎನ್ನುವುದು ಯಾವಾಗ ನನಗೆ ಅರ್ಥವಾಯಿತೋ, ಅಂದೇ ಕಾಂಗ್ರೆಸ್ ಪಕ್ಷವು ಅವರನ್ನು ಹೊರಹಾಕಿತು ಎಂದು ಹೇಳಿದರು.
ಪಂಜಾಬ್ ಒಂದು ಗಡಿ ಹಾಗೂ ಬಹಳ ಸೂಕ್ಷ್ಮ ರಾಜ್ಯ. ಪಂಜಾಬ್ ಅನ್ನು ಕಾಂಗ್ರೆಸ್ ಪಕ್ಷ ಮಾತ್ರವೇ ಅರ್ಥಮಾಡಿಕೊಳ್ಳಬಲ್ಲದು ಮತ್ತು ರಾಜ್ಯದಲ್ಲಿ ಶಾಂತಿ ಕಾಪಾಡಬಹುದು. ಒಂದು ವೇಳೆ ಶಾಂತಿ ನಾಶವಾದರೆ ಇಲ್ಲಿ ಏನೂ ಉಳಿಯುವುದಿಲ್ಲ ಎಂದರು.