ಬೆಂಗಳೂರು, ಏ. 12: ಕನ್ನಡದ ಮೇರು ನಟ ಡಾ. ರಾಜ್ಕುಮಾರ್ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರುಗಳು ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು.
ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ರಾಜ್ಕುಮಾರ್ ಹಾಗೂ ಇತರರು, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ನಟ ಪುನೀತ್ ರಾಜ್ಕುಮಾರ್, ಅಪ್ಪಾಜಿ ತೀರಿಹೋಗಿ 15 ವರ್ಷ ಕಳೆದಿದೆ. ಅವರು ನಮ್ಮೊಂದಿಗೆ ಇಲ್ಲ ಎನ್ನುವ ಭಾವನೆ ಬಂದಿಲ್ಲ. ಅವರು ನಮಗಾಗಿ ಬಿಟ್ಟುಹೋಗಿರುವುದು ಪ್ರೀತಿ ವಿಶ್ವಾಸ ಎಂದು ತಿಳಿಸಿದರು.
ಇದಕ್ಕೂ ಮುನ್ನ ವರನಟ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಸಮಾಧಿಗೆ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವಕುಮಾರ್ ಪೂಜೆ ಸಲ್ಲಿಸಿ, ನಮಿಸಿದರು. ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಮಾಸ್ಕ್ ಧರಿಸಿ ಓಡಾಡೋದನ್ನ ಮರೆಯಬೇಡಿ.
ಒಂದು ವರ್ಷ ಕಷ್ಟ ಪಟ್ಟಿದ್ದೇವೆ, ಮತ್ತೆ ಲಾಕ್ಡೌನ್ ಬರೋದು ಬೇಡ.ನಮ್ಮ ಜವಾಬ್ದಾರಿ ನಾವು ನಿಭಾಯಿಸಿದ್ರೆ ಲಾಕ್ಡೌನ್ ಪ್ರಶ್ನೆಯೇ ಬರಲ್ಲ ಎಂದರು.