ನವದೆಹಲಿ, ಫೆ. 12: ಗುಲಾಂ ನಬಿ ಅಜಾದ್ ನಿವೃತ್ತಿಯಿಂದ ತೆರವಾದ ರಾಜ್ಯಸಭಾ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಲಿದ್ದು, ಈ ಬಗ್ಗೆ ರಾಜ್ಯಸಭಾ ಚೇರ್ಮನ್ಗೆ ಕಾಂಗ್ರೆಸ್ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಅಜಾದ್ ಅವರು ಜಮ್ಮು ಕಾಶ್ಮೀರ ಕ್ಷೇತ್ರದಿಂದ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮಂಗಳವಾರ ರಾಜ್ಯಸಭಾದಿಂದ ನಿವೃತ್ತಿ ಹೊಂದಿದ ನಾಲ್ವರು ಸದಸ್ಯರಲ್ಲಿ ಅಜಾದ್ ಸಹ ಒಬ್ಬರು. ಅಜಾದ್ ಅವರಿಗೆ ಮೇಲ್ಮನೆಯಲ್ಲಿ ಒಳ್ಳೆಯ ಬೀಳ್ಕೊಡುಗೆ ಸಹ ಸಿಕ್ಕಿತು. ಅಜಾದ್ ಕುರಿತು ಮಾತನಾಡುವಾಗ ಪ್ರಧಾನಿ ಮೋದಿ ಅವರು ಕಣ್ಣೀರು ಸಹ ಹಾಕಿದ್ದರು.
ಅಜಾದ್ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ ಅಜಾದ್ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರು ರಾಜಕೀಯ ಮಾತ್ರವಲ್ಲದೆ, ದೇಶ ಮತ್ತು ರಾಜ್ಯಸಭಾ ಜತೆಗೆ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
ಇದೀಗ ಅಜಾದ್ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಖರ್ಗೆ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದ್ದು, ಇನ್ನು ಮುಂದೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅನ್ನು ಖರ್ಗೆ ಅವರು ಮುನ್ನೆಡೆಸಲಿದ್ದಾರೆ. ಅಜಾದ್ ಅವರು ಫೆ. 15ರಂದು ನಿವೃತ್ತಿಯನ್ನು ಹೊಂದಲಿದ್ದಾರೆ.