ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರ್ತಿ ಮಾಡಿದ್ದಾರೆ. ಅದಕ್ಕೂ ಎರಡು ವರ್ಷ ಮೊದಲೇ ಚಿತ್ರರಂಗಕ್ಕೆ ಬಂದಿರಬಹುದು. ಕಿರುಚಿತ್ರಗಳಲ್ಲಿ ತೊಡಗಿಸಿಕೊಂಡಿರಬಹುದು. ಆದರೆ ನಾಯಕನಾಗಿ ದಶಕವಷ್ಟೇ ಆಗಿದೆ. ಹಾಗೆ ನೋಡಿದರೆ ಕನ್ನಡದ ಸ್ಟಾರ್ ಎನಿಸಿಕೊಂಡು ಐದು ವರ್ಷಗಳಷ್ಟೇ ಆಗಿವೆ. ಇದು ತುಂಬ ಕಡಿಮೆ ಕಾಲಾವಧಿ. ರಕ್ಷಿತ್ ಅವರಂಥ ಪ್ರತಿಭೆಯನ್ನು ಗಮನಿಸಿದರೆ ಅವರ ಯೋಜನೆಗಳೇ ಚಿತ್ರರಂಗದ ಮುಂದಿನ ಹೆಜ್ಜೆಗೆ ದಾರಿ ದೀಪವಾಗಬಹುದು. ಹೀಗೆ ತಾನು ಬೆಳೆಯುತ್ತಾ ಚಿತ್ರೋದ್ಯಮವನ್ನು ಬೆಳೆಸುವ ಅವಕಾಶ ಸಿಗುವುದು ಅಪರೂಪದಲ್ಲಿ ಕೆಲವರಿಗೆ ಮಾತ್ರ. ಅಂಥವರಲ್ಲಿ ಒಬ್ಬರಾಗಿರುವ ರಕ್ಷಿತ್ ಅವರ ದಶಕದ ಪಯಣದ ಕುರಿತಾದ ವಿಶೇಷ ನೆನಪುಗಳು ಇಲ್ಲಿವೆ.

ನಾಯಕನ ಪ್ರವೇಶ
ಕೆಲವರ ಹೆಸರೇ ಅವರ ಬಗ್ಗೆ ಬಹಳಷ್ಟು ಹೇಳುತ್ತವೆ. ರಕ್ಷಿತ್ ಶೆಟ್ಟಿ ಎನ್ನುವುದು ಕೂಡ ಅಂಥ ಹೆಸರು. ಶೆಟ್ಟಿಗಳೇನಿದ್ದರೂ ಬಾಲಿವುಡ್ ಮತ್ತು ಅಂಡರ್ವಲ್ಡ್ ಗೆ ಮೀಸಲು ಎನ್ನುವಂಥ ಸಂದರ್ಭ. ಕನ್ನಡದಲ್ಲಿ ಕೂಡ ಅದಾಗಲೇ ಬಹಳಷ್ಟು ಕರಾವಳಿಯ ಬಂಟರುಗಳಿದ್ದರೂ, ಹೆಸರಿನ ಜತೆಗಿನ ಶೆಟ್ಟಿ ಈ ಮಟ್ಟಿಗೆ ಹೈಲೈಟಾಗಿದ್ದು ಕಡಿಮೆ. ಅದೊಂದು ಹೆಸರೇ ಮೈನಸ್ ಆಗುವ ಸಂದರ್ಭ ಇದ್ದರೂ ಅದರಲ್ಲೇ ಗುರುತಿಸಿಕೊಂಡರು ರಕ್ಷಿತ್. ದಕ್ಷಿಣ ಕನ್ನಡದ ಪ್ರಾಂತ್ಯವನ್ನು ತೋರಿಸುವ ಜಾತಿ ಸೂಚಕ ಜತೆಗಿದ್ದರೂ ತಮ್ಮ ಏರಿಯಾ ಬೆಂಗಳೂರು ಎನ್ನುವುದನ್ನು `ನಮ್ ಏರಿಯಾಲ್ ಒಂದ್ ದಿನ’ ಚಿತ್ರದ ಮೂಲಕ ಸಾಬೀತು ಮಾಡಿದರು. ನಿರ್ದೇಶಕ ಅರವಿಂದ್ ಕೌಶಿಕ್ ಅವರಿಗೂ ಅದು ಪ್ರಥಮ ಚಿತ್ರವಾಗಿತ್ತು. ಆದರೆ ಆ ಸಿನಿಮಾ ಏರಿಯಾದಾಚೆ ಸದ್ದು ಮಾಡಲಿಲ್ಲ. ಎರಡು ವರ್ಷಗಳ ಬಳಿಕ ಅದೇ ನಿರ್ದೇಶಕರ ಜತೆಗೆ `ತುಘಲಕ್’ ಸಿನಿಮಾದಲ್ಲಿ ನಾಯಕರಾದರು ರಕ್ಷಿತ್. ಚಿತ್ರ ಬಿಡುಗಡೆಯ ಬಳಿಕ ಕಾಡಿದ ನಿರಾಶೆ, ರಕ್ಷಿತ್ ಅವರನ್ನುತುಘಲಕ್ ಮಾದರಿಯಲ್ಲೇ ಗೊಂದಲಗಳಿಗೆ ದೂಡಿತು. ಚಿತ್ರರಂಗ ಬಿಟ್ಟೇ ಬಿಡುವ ತೀರ್ಮಾನ ಮಾಡುವ ಮೊದಲು ಕೊನೆಯ ಪ್ರಯತ್ನವಾಗಿ `ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಎನ್ನುವ ಚಿತ್ರ ಮಾಡಿದರು. ಸುನಿ ನಿರ್ದೇಶನದ ಆ ಚಿತ್ರ ಟ್ರೇಲರ್ ನಿಂದಲೇ ಸದ್ದು ಮಾಡಿತ್ತು. ಚಿತ್ರ ಸಿಂಪಲ್ ಅಲ್ಲ; ಭರ್ಜರಿ ಜಯವನ್ನೇ ದಾಖಲಿಸಿತು.
ನಿರ್ದೇಶನದ ಸಾಹಸ

ನಾಯಕನಾಗಿ ಒಂದು ಚಿತ್ರ ಗೆದ್ದರೆ ಸಾಕು; ಅದುವರೆಗೆ ಅಸಡ್ಡೆ ಮಾಡಿದವರಿಗೆ ಪ್ರತ್ಯುತ್ತರ ಎನ್ನುವಂತೆ ಬರುವ ಅವಕಾಶಗಳಿಂದ ಕೊಳ್ಳೆ ಹೊಡೆಯುವವರೇ ಅಧಿಕ. ಆದರೆ ರಕ್ಷಿತ್ ಒಳಗೆ ಒಬ್ಬ ಕ್ರಿಯಾಶೀಲ ತಂತ್ರಜ್ಞನಿದ್ದ. ಹಾಗಾಗಿಯೇ ಒಂದು ಗೆಲುವಿನ ಹಿನ್ನೆಲೆ ಇಟ್ಟುಕೊಂಡು ಅದುವರೆಗಿನ ಕಲೆಯ ಕನಸುಗಳಿಗೆ ಕಳೆ ನೀಡಲು ಹೊರಟರು. ಸಿಂಪಲ್ ಸುನಿ ಮತ್ತೆ ನಿರ್ಮಾಣ ವಿಭಾಗದಲ್ಲಿ ಜತೆಯಾದರೆ, ರಕ್ಷಿತ್ ಸ್ವತಃ ನಾಯಕನಾಗಿ, ನಿರ್ದೇಶಕನಾಗಿ ರಂಗ ಪ್ರವೇಶಿಸಿದರು. ಚಿತ್ರದ ಟ್ರೇಲರ್ ನಲ್ಲಿದ್ದ ಮಂಗಳೂರು ಕನ್ನಡದ ಸಂಭಾಷಣೆ ಸಕತ್ ವೈರಲ್ ಆಯಿತು. `ಶೂಟ್ ಮಾಡ್ಬೇಕಾ?’ ಎನ್ನುವ ಡೈಲಾಗ್ ಗೆ ಜನ ಮಾರುವ ಹೋಗುವ ಹೊತ್ತಲ್ಲಿ ಪೂರ್ತಿ ಚಿತ್ರ ಶೂಟ್ ಮಾಡಿ ಪರದೆಗೆ ತಂದಿದ್ದರು ರಕ್ಷಿತ್. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಲಭಿಸಿತು. ಕಾರಣ ಅದರ ದೀರ್ಘಾವಧಿಯೇ ಪ್ರಮುಖ ಸಮಸ್ಯೆ ಆಗಿತ್ತು. ಆದರೆ ಒಂದಂತೂ ನಿಜ. ಚಿತ್ರದ ಮೂಲಕ ಒಬ್ಬ ಪ್ಯಾಷನ್ ಇರುವ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ. ಮಾತ್ರವಲ್ಲ, ಅದುವರೆಗೆ ತಮಾಷೆಗಾಗಿ ಬಳಕೆಯಾಗುತ್ತಿದ್ದ ಮಂಗಳೂರು ಕನ್ನಡ ಪದಗಳು ಹೀರೋಯಿಸಮ್ ಪಡೆದುಕೊಂಡವು. ಚಿತ್ರ ಗೆದ್ದ ಕುರುಹಾಗಿ ಪರಭಾಷೆಗಳಿಗೂ ರಿಮೇಕ್ ಆಯಿತು. ಅಲ್ಲಿಗೆ ನಿರ್ದೇಶಕನ ಜತೆಗೆ ಸ್ಟಾರ್ ಕೂಡ ಹುಟ್ಟಿಕೊಂಡಿದ್ದು ಎದ್ದು ಕಾಣುವಂತಿತ್ತು.
ಸಂಸ್ಕೃತಿಯ ಪ್ರತಿನಿಧಿ
ಆರಂಭದಲ್ಲೇ ಹೇಳಿದಂತೆ ರಕ್ಷಿತ್ ಹೆಸರಿನ ಜತೆಗಿರುವ ಶೆಟ್ಟಿ ಹೇಗಿ ಕರಾವಳಿಯನ್ನು ಪ್ರತಿನಿಧಿಸಿತ್ತೋ, ಅವರ ಚಿತ್ರ ಕೂಡ ಕಲರ್ ಫುಲ್ ಕರಾವಳಿಯನ್ನು ಅನಾವರಣ ಮಾಡಿತ್ತು. ಅದರಲ್ಲಿ ಮಂಗಳೂರು ಕನ್ನಡದ ಜತೆಗೆ ಕುಂದಗನ್ನಡದಲ್ಲೇ ಒಂದು ಪ್ರಮುಖ ಎಪಿಸೋಡ್ ಕೂಡ ಇತ್ತು. ಸಂಭಾಷಣೆಯ ಜತೆಯಲ್ಲೇ ಚಿತ್ರದ ಮೂಲಕ `ಹುಲಿವೇಷ’ದ ಜಾನಪದ ಕುಣಿತಕ್ಕೆ ರಾಜ್ಯಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡರು. ಕರಾವಳಿಯಲ್ಲಿ ನವರಾತ್ರಿಯಲ್ಲಿ ಮಾತ್ರ ಸದ್ದು ಮಾಡುತ್ತಿದ್ದ ಆ ಕುಣಿತ, ಬಾಲ್ಯದ ಕುತೂಹಲವಾಗಿ ಮಾತ್ರ ಉಳಿದಿದ್ದ ಆ ಸಂಸ್ಕೃತಿಯನ್ನು ಎಲ್ಲರೂ ಒಪ್ಪಿಕೊಳ್ಳುವಂತೆ, ನಮ್ಮದಾಗಿಸಿ ಅಪ್ಪುವಂತೆ ಮಾಡಿದ ಕೀರ್ತಿ ರಕ್ಷಿತ್ ಶೆಟ್ಟಿಯ ಪಾಲಾಯಿತು. ಇದರ ನಡುವೆ ರಕ್ಷಿತ್ ಬೆಂಗಳೂರಲ್ಲಿದ್ದರೂ ಗಾಂಧಿನಗರದ ಕೈಗೆ ಸಿಗುತ್ತಿಲ್ಲ ಎನ್ನುವ ಆಪಾದನೆ ಇತ್ತು. ಅಂಥದೊಂದು ಪ್ರಶ್ನೆಯನ್ನು ಪತ್ರಕರ್ತನಾಗಿ ಅವರ ಮುಂದೆ ಇಟ್ಟಾಗ ಅವರು ನೀಡಿದ್ದು, ವ್ಯವಸ್ಥೆಯನ್ನು ಮುಟ್ಟಿ ನೋಡಿಕೊಳ್ಳುವಂಥ ಉತ್ತರ! “ಆರಂಭದಲ್ಲಿ ನಾನು ಅವಕಾಶಕ್ಕಾಗಿ ಗಾಂಧಿನಗರದ ಗಲ್ಲಿಗಳಲ್ಲಿ ಸಾಕಷ್ಟು ಅಲೆದಾಡಿದ್ದೇನೆ. ಸಂಪೂರ್ಣ ಸೋತು ಮರಳಿ ಬಿಡೋಣ ಎನ್ನುವ ಹಂತದಲ್ಲಿ ನಮ್ಮದೊಂದು ತಂಡ ಆಸರೆ ನೀಡಿ ನಾಯಕನಾಗಿಸಿದೆ, ಗೆಲುವು ನೀಡಿದೆ. ಅದರ ಬಳಿಕವೂ ನಮ್ಮಲ್ಲಿ ಕನಸುಗಳಿವೆ. ನಮ್ಮ ತಂಡದಲ್ಲಿ ಪರದೆಗೆ ನಾನೇ ನಾಯಕ. ಒಂದು ಗೆಲುವಿನ ಕಾರಣ ಕೊಟ್ಟು ನಾನು ತಂಡ ಬಿಟ್ಟು ಗಾಂಧಿನಗರಕ್ಕೆ ಹೋಗುವ ಅಗತ್ಯ ಏನಿದೆ? ಮಾತ್ರವಲ್ಲ; ನನಗೆ ಈ ತಂಡದಷ್ಟು ಕಂಫರ್ಟ್ ಬೇರೆ ಕಡೆ ಸಿಗಲು ಸಾಧ್ಯವಿಲ್ಲ” ಎಂದರು. ಅವರ ನಿರ್ಧಾರ ಸರಿಯಾಗಿತ್ತು ಎನ್ನುವುದನ್ನು ಮುಂದಿನ ಚಿತ್ರ ಸಾಬೀತುಪಡಿಸಿತು. ಅದು ಯಾವ ಒತ್ತಡಕ್ಕೆ ಕಟ್ಟು ಬಿದ್ದರೋ ಗೊತ್ತಿಲ್ಲ; ಯೋಗರಾಜ್ ಭಟ್ ನಿರ್ದೇಶನದ `ವಾಸ್ತು ಪ್ರಕಾರ’ ಚಿತ್ರದಲ್ಲಿ ನಟಿಸಿದರು. ಬಿಡುಗಡೆಯ ಬಳಿಕ ವಾಸ್ತು ಪ್ರಕಾರ ಅದು ರಕ್ಷಿತ್ ಗೆ ಹೇಳಿದಂಥ ಚಿತ್ರವೇ ಅಲ್ಲ ಎನ್ನುವ ವಾಸ್ತವ ಸಾಬೀತಾಯಿತು.
ಪ್ರತಿಭೆಗಳ ಕಾರ್ಯಾಗಾರ

2016ರಲ್ಲಿ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ತೆರೆಕಂಡ ಚಿತ್ರ `ರಿಕ್ಕಿ’. ಅದರಲ್ಲಿಯೂ ಕರಾವಳಿ ಮತ್ತು ನಕ್ಸಲ್ ಬದುಕಿನ ಛಾಯೆ ಇತ್ತು. ಆದರೆ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಚಿತ್ರ ಸೋತಂತಿತ್ತು. ಅದಕ್ಕೆ ಚಿತ್ರತಂಡ ನೀಡಿದ್ದು, ಕತೆಯೊಳಗೆ ನಿರ್ಮಾಪಕರು ಮೂಗು ತೂರಿಸಿದ್ದರು ಎನ್ನುವ ಕಾರಣ. ಅದು ನಿಜವೇ ಇರಬಹುದು ಅನಿಸಿದ್ದು ಮಾತ್ರ ಅದೇ ನಿರ್ದೇಶಕ `ಕಿರಿಕ್ ಪಾರ್ಟಿ’ ಎನ್ನುವ ಚಿತ್ರವನ್ನು ನೀಡಿದಾಗ. ವರ್ಷಾಂತ್ಯದಲ್ಲಿ ತೆರೆಕಂಡ ಆ ಚಿತ್ರ ಹಲವಾರು ದಾಖಲೆಗಳನ್ನೇ ಸೃಷ್ಟಿಸಿತು. ರಿಕ್ಕಿ ಮೂಲಕವೇ ಮೇಕಿಂಗ್ ವಿಚಾರದಲ್ಲಿ ಗಮನ ಸೆಳೆದಿದ್ದ ರಿಷಭ್ ಶೆಟ್ಟಿ, ಕಿರಿಕ್ ಪಾರ್ಟಿಯಲ್ಲಿ ಹೇಗೆ ಪ್ರೇಮ ಕತೆಯನ್ನು ಶುದ್ಧ ತಮಾಷೆಯೊಂದಿಗೆ ನೀಡಬಲ್ಲೆ ಎಂದು ತೋರಿಸಿಕೊಟ್ಟಿದ್ದರು. ರಕ್ಷಿತ್ ವಿಶೇಷತೆ ಏನೆಂದರೆ ಅವರು ಬೆಳೆಯುತ್ತಾ ಒಂದು ಸಮೂಹವನ್ನೇ ಬೆಳೆಸಿಕೊಂಡು ಹೋದರು. ಅದರಲ್ಲಿ ಯಾವುದೇ ಪ್ರಾದೇಶಿಕ ಆದ್ಯತೆಗಳಿಗೆ ಅವಕಾಶಗಳಿರಲಿಲ್ಲ. ಪ್ರತಿಭೆಗಳಿಗೆ ಹೇರಳ ಅವಕಾಶ ಇತ್ತು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಿರ್ದೇಶಕ ರಿಷಭ್ ಶೆಟ್ಟಿ, ನಾಯಕಿ ರಶ್ಮಿಕಾ ಮಂದಣ್ಣ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.. ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಅಂಥದೊಂದು ಪಟ್ಟಿಯಲ್ಲಿ ಅದೇ ವರ್ಷ ರಕ್ಷಿತ್ ಚಿತ್ರ ನಿರ್ದೇಶಿಸಿದ ಹೇಮಂತ್ ರಾವ್ ಕೂಡ ಸೇರಿಕೊಳ್ಳುತ್ತಾರೆ. `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಎನ್ನುವ ಆ ಚಿತ್ರ ಮುಂದೆ ಅಂಥದೇ ಹತ್ತಾರು ಸಿನಿಮಾ ಶೀರ್ಷಿಕೆಗಳು ಬರಲು ನಾಂದಿಯಾಗುತ್ತದೆ! ಇಂದು ನಿರ್ದೇಶಕ ಹೇಮಂತ್ ರಾವ್ ಕನ್ನಡದ ಕ್ಲಾಸ್ ನಿರ್ದೇಶಕರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಸಿಂಪಲ್ ಆಗದ ಲವ್ ಸ್ಟೋರಿ
ಒಬ್ಬ ವ್ಯಕ್ತಿ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ ಸಾಗಬೇಕಾದರೆ ಆತನಿಗೆ ಹತ್ತಾರು ಕವಲುದಾರಿಗಳು ಕಾಣಿಸುತ್ತವೆ, ಕೆಲವೊಮ್ಮೆ ಗೊಂದಲ ಮೂಡಿಸುತ್ತವೆ. ಆದರೆ ಕಿರಿಕ್ ಪಾರ್ಟಿಯ ಮೂಲಕ ರಕ್ಷಿತ್ ಶೆಟ್ಟಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ ಅಂಥದೊಂದು ಕವಲು ದಾರಿಯಂತಿರಲಿಲ್ಲ. ಬದಲಿಗೆ ಬದುಕಿನ ಬಯಲುದಾರಿಯಲ್ಲಿ ಸಿಕ್ಕ ಚಂದನದ ಗೊಂಬೆಯಂತಿದ್ದರು. ಹೆಸರಷ್ಟೇ ಅಲ್ಲ; ಎತ್ತರ, ಪ್ರತಿಭೆ ಎಲ್ಲದರಲ್ಲಿಯೂ ರಕ್ಷಿತ್ಗೆ ಹತ್ತಿರವಾಗಿದ್ದರು. ಹಾಗಾಗಿ ಲವ್ ಸ್ಟೋರಿ ಸಿಂಪಲ್ಲಾಗಿಯೇ ಶುರುವಾಗಿತ್ತು. ನಿಶ್ಚಿತಾರ್ಥವೂ ಆಗಿತ್ತು. ರಕ್ಷಿತ್ ತಂಡದಲ್ಲಿ ಎಲ್ಲವೂ ಇತ್ತು. ಸಿನಿಮಾ, ನಟನೆ, ನಿರ್ಮಾಣ ಹೀಗೆ ಎಲ್ಲ ವಿಭಾಗದಲ್ಲಿಯೂ ಆಕೆಗೆ ಅವಕಾಶ ಇತ್ತು. ಆದರೆ ರಶ್ಮಿಕಾ ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಚಾಚುವ ವೃಕ್ಷದಂಥ ನಾರಿಯಲ್ಲ. ಅವರದು ಕವಲು ದಾರಿ. ಇದ್ದಲ್ಲೆ ಎತ್ತರ ಬೆಳೆಯುವ ಬದಲು ಬಳ್ಳಿಯಂತೆ ಸುತ್ತೆಲ್ಲ ಹರಡಿ ಉತ್ತರ ನೀಡಲು ಬಯಸಿದರು. ಅದೇನಾಯಿತೋ ಗೊತ್ತಿಲ್ಲ ಆಕೆಯನ್ನು ಆಕೆಯದೇ ದಾರಿಯಲ್ಲಿ ಬಿಟ್ಟು ತಾವು ಸಿನಿಮಾದತ್ತ ಗಮನಹರಿಸಿದರು ರಕ್ಷಿತ್ ಶೆಟ್ಟಿ.
ಏನೇ ಹೇಳಿ ರಕ್ಷಿತ್ ಗಟ್ಟಿ. ಬೇರೆ ಯಾರಾದರೂ ಆಗಿದ್ದರೆ ಹೆಸರು ಮಾಡುವ ಹೊತ್ತಲ್ಲೇ ಇಂಥದೊಂದು ಹೊಡೆತ ಬಿತ್ತೆಂಬ ಕಾರಣದಿಂದ ಸಿನಿಮಾ ತೊರೆದು ಮೂಲೆ ಸೇರುತ್ತಿದ್ದರೇನೋ. ಹುಡುಗರು ಡಿಪ್ರೆಶನ್ ಗೆ ಕಾರಣ ಹುಡುಕುವ ಕಾಲ ಇದು. ಆದರೆ ರಕ್ಷಿತ್ ಸಿನಿಮಾಸಕ್ತಿ ಅವರನ್ನು ಒಂದು ದೊಡ್ಡ ಚಿತ್ರ ಮಾಡಲು ಪ್ರೇರೇಪಿಸಿತು. ಅದುವೇ `ಅವನೇ ಶ್ರಿಮನ್ನಾರಾಯಣ’. ಆದರೆ ಅದೊಂದು ಚಿತ್ರಕ್ಕಾಗಿ ರಕ್ಷಿತ್ ತೆಗೆದುಕೊಂಡಿದ್ದು ಮೂರು ವರ್ಷಗಳು! ಆ ಹೊತ್ತಿಗೆ ರಶ್ಮಿಕಾ ಬರೋಬ್ಬರಿ ಏಳು ಚಿತ್ರ ಮಾಡಿ ಮುಗಿಸಿದ್ದರು. ಅದರಲ್ಲಿ ಎರಡು ಕನ್ನಡ ಸಿನಿಮಾಗಳಾದರೆ ಉಳಿದೆಲ್ಲವೂ ತೆಲುಗು ಸ್ಟಾರ್ ಸಿನಿಮಾಗಳು! ಒಂದು ವೇಳೆ ಆಕೆ ರಕ್ಷಿತ್ ಕಂಫರ್ಟ್ ಜೋನಲ್ಲಿ ನಾಯಕಿಯಾಗಿರುತ್ತಿದ್ದರೆ, ಒಂದುವೇಳೆ ಅವನೇ ಶ್ರಿಮನ್ನಾರಾಯಣದ ನಾಯಕಿಯಾಗುವುದಿದ್ದರೂ ಮೂರು ವರ್ಷ ಕಾಯಬೇಕಿತ್ತು! ನಾಯಕಿಯರ ಬದುಕು ನಾಯಕರಷ್ಟು ಕಾಲಾವಧಿ ಹೊಂದಿರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಅವರಿಬ್ಬರು ಬ್ರೇಕಪ್ ಆಗಿದ್ದು ಕೂಡ ಸರಿಯಾಗಿದೆ ಎಂದೇ ಹೇಳಬಹುದು. ಸಿನಿಮಾರಂಗದಲ್ಲಿ ಇದು ಹೊಸತೇನೂ ಅಲ್ಲ. ಆದರೆ ರಕ್ಷಿತ್ ಆ ಸಂದರ್ಭದಲ್ಲಿ ನೀಡಿದಂಥ ಅವನೇ `ಶ್ರೀಮನ್ನಾರಾಯಣ’ ಚಿತ್ರ ಇದೆಯಲ್ಲ? ಅದು ಕನ್ನಡದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿತು.
ಅವನೇ ಶ್ರೀಮನ್ನಾರಾಯಣ
ಅವನೇ ಶ್ರೀಮನ್ನಾರಾಯಣ ಎನ್ನುವ ಬೃಹತ್ ಚಿತ್ರದ ಮೂಲಕ ತನ್ನ ತಂಡದಿಂದ ರಕ್ಷಿತ್ ನೀಡಿದಂಥ ಮತ್ತೋರ್ವ ಹೊಸ ಪ್ರತಿಭೆ ನಿರ್ದೇಶಕ ಸಚಿನ್ ರವಿ. ಸಂಕಲನಕಾರರಾಗಿ ಮತ್ತು ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಅವರು, ಐದು ಭಾಷೆಗಳಲ್ಲಿ ತೆರೆಕಾಣುವ ಚಿತ್ರಕ್ಕೆ ನಿರ್ದೇಶಕರಾಗಿದ್ದು ವಿಶೇಷ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಆಯ್ದುಕೊಂಡ ಸಬ್ಜೆಕ್ಟ್ ತೀರಾ ವಿಭಿನ್ನವಾಗಿತ್ತು. ಅದುವರೆಗೆ ಕರಾವಳಿಯಲ್ಲಿದ್ದ ಕತೆ ಈ ಬಾರಿ ಕಾಲ್ಪನಿಕ ಊರಿನಲ್ಲಿತ್ತು. ಅಲ್ಲಿಂದಲೇ ಪಂಚ ಭಾಷೆಗಳಲ್ಲಿಯೂ ಗುರುತಿಸುವ ಪ್ರಯತ್ನ ಮಾಡಿದರು. ಕನ್ನಡದಲ್ಲಿ ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಚಿತ್ರೀಕರಿಸಿದ ಸಿನಿಮಾ ವಿ ರವಿಚಂದ್ರನ್ ನಿರ್ದೇಶಿಸಿದ `ಶಾಂತಿ ಕ್ರಾಂತಿ’. ಅದರ ಬಳಿಕ ಅದೇ ರೀತಿಯಲ್ಲಿ ತೆರೆಕಂಡ ಸಿನಿಮಾ ಕೆ ಜಿ ಎಫ್. ಅದು 2018ರ ಡಿಸೆಂಬರ್ ತಿಂಗಳಲ್ಲಿ ತೆರೆಕಂಡಿತ್ತು. ಸರಿಯಾಗಿ ಒಂದು ವರ್ಷದ ಬಳಿಕ ಅಂಥದೊಂದು ಪ್ರಯತ್ನ ನಡೆದಿದ್ದು ಅವನೇ ಶ್ರೀ ಮನ್ನಾರಾಯಣದ ಮೂಲಕ. ಆದರೆ ಇಲ್ಲಿ ಮೇಕಿಂಗ್ ಒಂದೇ ಭಾಷೆಯಲ್ಲಿತ್ತು. ಚಿತ್ರವನ್ನು ಉಳಿದ ಮೂರು ಭಾಷೆಗಳಿಗೆ ಡಬ್ ಮಾಡಲಾಯಿತು. ಚಿತ್ರ ಉಳಿದ ಭಾಷೆಗಳಲ್ಲಿ ಗೆಲುವು ಕಾಣಲಿಲಲ್ಲ. ಕನ್ನಡದಲ್ಲಿ ಗೆಲುವಿಗಿಂತ ಅದೊಂದು ಚಿತ್ರ ಮೂಡಿಸಿದ ಸದ್ದು, ಪ್ರಭಾವ ಮಾತ್ರ ತುಂಬ ದೊಡ್ಡದಾಗಿತ್ತು. ಅದಾಗಲೇ `ಕೆಜಿಎಫ್’ ಮಾಡಿದ್ದ ಸುದ್ದಿಯಿಂದಾಗಿ ರಕ್ಷಿತ್ ಚಿತ್ರದ ಕಡೆಗೆ ಪರಭಾಷೆಯವರ ಗಮನ ಹೆಚ್ಚಾಗಿಯೇ ಇತ್ತು. ನಮ್ಮ ಕಡೆಯಿಂದ ಪರಭಾಷೆಗೆ ಹೆಮ್ಮೆಯಿಂದ ಪ್ರೆಸೆಂಟ್ ಮಾಡಬಹುದಾದ ಸಕಲ ಗುಣಮಟ್ಟದ ಸಿನಿಮಾ ಅದಾಗಿತ್ತು. ಮಾತ್ರವಲ್ಲ; ಲುಕ್, ಸ್ಟೈಲ್, ನಟನೆ ಎಲ್ಲದರಲ್ಲಿಯೂ ರಕ್ಷಿತ್ ಕೂಡ ನಮ್ಮ ನೆಲದ ಪ್ರತಿಭೆಯಾಗಿ ದಶ ದಿಕ್ಕಿಗೂ ವ್ಯಾಪಿಸಿದರು. ಇದೀಗ ಅವರ ಸಿನಿಪಯಣಕ್ಕೆ ದಶ ವರ್ಷವಾಗಿದೆ. ಅವರ ಆತ್ಮೀಯರಿಗೆ, ಅಭಿಮಾನಿಗಳಿಗೆ ಹರ್ಷವಾಗಿದೆ.
ಮುಂದಿನ ಚಿತ್ರಗಳು
ಇದುವರೆಗೆ ಒಂದಷ್ಟು ಸಮಯ ತೆಗೆದುಕೊಂಡೇ ಚಿತ್ರ ನೀಡಿದ ರಕ್ಷಿತ್ ಈ `ಕೋವಿಡ್ 19′ ಸಮಸ್ಯೆ ಮುಗಿದಾಕ್ಷಣ ವೇಗ ಪಡೆಯಲಿದ್ದಾರೆ. ಈಗಾಗಲೇ ರಕ್ಷಿತ್ ಅವರನ್ನೇ ನಾಯಕರನ್ನಾಗಿಸಿ ಅವರ ಗರಡಿಯಲ್ಲಿರುವವರು ತಯಾರಿಸಿರುವ ಚಿತ್ರಗಳು ಬಿಡುಗಡೆಗೆ ತಯಾರಾಗುತ್ತಿವೆ. ಅವುಗಳಲ್ಲಿ ಕಿರಣ್ ರಾಜ್ ನಿರ್ದೇಶನದ `777 ಚಾರ್ಲಿ’ ಪ್ರಮುಖವಾಗಿದೆ. ಅದರ ಬೆನ್ನಲ್ಲೇ ಹೇಮಂತ್ ರಾವ್ ನಿರ್ದೇಶನದ ಚಿತ್ರ `ಸಪ್ತ ಸಾಗರಾದಚೆ ಎಲ್ಲೋ’ ತೆರೆಗೆ ಬರುವ ನಿರೀಕ್ಷೆ ಇದೆ. ಇದರೊಂದಿಗೆ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಭೀಮಸೇನ ನಳ ಮಹರಾಜ’ ಚಿತ್ರವೂ ಆಗಮನದ ಬಗ್ಗೆ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದೆ ಬಂದು; ಕೇವಲ ದಶಕವೊಂದರಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿರುವುದಷ್ಟೇ ಅಲ್ಲ; ನಾಡಿನ ಸಂಸ್ಕೃತಿಯನ್ನು ಪಸರಿಸುವಂಥ ಕತೆಗಳನ್ನು ಸೃಷ್ಟಿಸಬಲ್ಲ ಬರಹಗಾರರಿಗೆ ಆಶ್ರಯದಾತರಾಗಿದ್ದಾರೆ. ಬಹುಶಃ ಕನ್ನಡ ಚಿತ್ರರಂಗದ `ವಿನೂತನ ಭವಿಷ್ಯದಲ್ಲಿ’ ತಾರೆಯಾಗಿ ಮೆರೆಯಲು ರಕ್ಷಿತ್ ಅವರಷ್ಟು ದೇಸೀ ಅರ್ಹತೆ ಬೇರಾರಿಗೂ ಇಲ್ಲ.