ಮುಜರಾಯಿ ದೇವಾಲಯಗಳಲ್ಲಿ ಹುಂಡಿ (Ram Mandir donation guidelines) ಎಣಿಕೆಗೆ ಹೊಸ ನಿಯಮ: ಸರ್ಕಾರದಿಂದ ಕಠಿಣ ಮಾರ್ಗಸೂಚಿ
ಸಿಸಿಟಿವಿ, ಕ್ಯೂಆರ್ ಕೋಡ್, ವಿಡಿಯೊ ಚಿತ್ರೀಕರಣ ಕಡ್ಡಾಯ; ಅಕ್ರಮ ಕಂಡುಬಂದರೆ ಅಧಿಕಾರಿಗಳೇ ನೇರ ಹೊಣೆ
ಡಿಜಿಟಲ್ ದೇಣಿಗೆಗೆ ಉತ್ತೇಜನ, ಮುಖ ಗುರುತಿಸುವಿಕೆ ಸೇರಿ ಹಲವು ಭದ್ರತಾ ಕ್ರಮ ಜಾರಿ
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣದ ಹಿನ್ನೆಲೆ ರಾಜ್ಯ ಸರ್ಕಾರ (Ram Mandir donation guidelines) ಮಹತ್ವದ ನಿರ್ಧಾರ ಕೈಗೊಂಡಿದ್ದು, ಕರ್ನಾಟಕದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಎಣಿಕೆ ಹಾಗೂ ದೇಣಿಗೆ ನಿರ್ವಹಣೆಗೆ ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ (Rajendra Kumar Kataria) ಅವರು ಈ ಕುರಿತು ಆದೇಶ ಹೊರಡಿಸಿದ್ದು, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿತ ಆಡಳಿತಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಈ ಕ್ರಮದ ಉದ್ದೇಶ ದೇವಾಲಯಗಳ ಹುಂಡಿಗಳ ಸುರಕ್ಷತೆಯನ್ನು ಹೆಚ್ಚಿಸುವುದು, ದೇಣಿಗೆ ಹಣದ ಪಾರದರ್ಶಕ ನಿರ್ವಹಣೆಯನ್ನು ಖಚಿತಪಡಿಸುವುದು ಹಾಗೂ ಭಕ್ತರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವುದಾಗಿದೆ.
ಮಾರ್ಗಸೂಚಿಗಳ ಪ್ರಕಾರ ದೇವಾಲಯಗಳಲ್ಲಿ ಅಳವಡಿಸಲಾಗುವ ಪ್ರತಿಯೊಂದು ಹುಂಡಿಯೂ (Ram Mandir donation guidelines) ಎಲ್ಲರಿಗೂ ಸ್ಪಷ್ಟವಾಗಿ ಕಾಣುವ ಸ್ಥಳದಲ್ಲಿರಬೇಕು ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಇರಬೇಕು.
ಹುಂಡಿಗಳ ಸುತ್ತ ನಾಲ್ಕು ದಿಕ್ಕುಗಳಿಂದ ದೃಶ್ಯ ಸೆರೆಯಾಗುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿ, ಅವುಗಳ ದೃಶ್ಯಗಳನ್ನು ಸರ್ವರ್ನಲ್ಲಿ ಸಂರಕ್ಷಿಸಬೇಕು.
ಕರ್ಪೂರದ ಹೊಗೆ ಅಥವಾ ಇತರ ವಿಧಾನಗಳಿಂದ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳನ್ನು ತಡೆಯಲು ವೆಬ್ ಆಧಾರಿತ ಕ್ಯಾಮೆರಾಗಳ ಬಳಕೆಗೆ ಆದ್ಯತೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಗಳಲ್ಲಿ ಈ ಕ್ಯಾಮೆರಾಗಳ ನೇರ ಮೇಲ್ವಿಚಾರಣೆಗೆ ಡ್ಯಾಶ್ಬೋರ್ಡ್
(Dashboard) ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಅಗ್ನಿ ಸುರಕ್ಷತೆ ಸೇರಿದಂತೆ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅಗತ್ಯ ವ್ಯವಸ್ಥೆಗಳನ್ನೂ ಕಡ್ಡಾಯಗೊಳಿಸಲಾಗಿದೆ.
ಭಕ್ತರು ನಗದು ಹೊತ್ತು ಬರುವುದರಿಂದ ಉಂಟಾಗುವ ಜೇಬುಕಳ್ಳತನ ಮತ್ತು ಇತರ ಅಪಾಯಗಳನ್ನು ಕಡಿಮೆ ಮಾಡಲು ಡಿಜಿಟಲ್ ದೇಣಿಗೆ ವ್ಯವಸ್ಥೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.
ಹುಂಡಿ ಇರುವ ಸ್ಥಳಗಳಲ್ಲಿ ಮಾತ್ರ ಅಧಿಕೃತ ಕ್ಯೂಆರ್ ಕೋಡ್ (QR Code) ಅಳವಡಿಸಿ, ಯುಪಿಐ, ಭೀಮ್ ಹಾಗೂ ಇತರ ಡಿಜಿಟಲ್ ಪಾವತಿ ಸೌಲಭ್ಯಗಳ ಮೂಲಕ ದೇಣಿಗೆ,
ಪ್ರಸಾದ, ಸೇವಾ ಟಿಕೆಟ್ ಮತ್ತು ಇತರೆ ದೇವಾಲಯ ಸೇವೆಗಳ ಪಾವತಿಯನ್ನು ನಗದು ರಹಿತವಾಗಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.
ಕ್ಯೂಆರ್ ಕೋಡ್ಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಜವಾಬ್ದಾರಿಯನ್ನೂ ದೇವಾಲಯದ ಆಡಳಿತಕ್ಕೆ ನೀಡಲಾಗಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೇವಾಲಯದ ಲೆಕ್ಕಪತ್ರ ನಿರ್ವಹಣೆಯೊಂದಿಗೆ ಸಂಯೋಜಿಸಿ, ಪಾರದರ್ಶಕ ಹಣಕಾಸು ವ್ಯವಸ್ಥೆ ರೂಪಿಸುವುದಕ್ಕೂ ನಿರ್ದೇಶಿಸಲಾಗಿದೆ.
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲೂ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೆಚ್ಚಿನ ದೇಣಿಗೆ ಸಂಗ್ರಹವಾಗುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಮಾನ್ಯ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ಹುಂಡಿ ಎಣಿಕೆ ನಡೆಸಲು ಮುಂಚಿತ ವೇಳಾಪಟ್ಟಿ ಸಿದ್ಧಪಡಿಸಬೇಕು.
ಎಣಿಕೆ ಕಾರ್ಯವನ್ನು ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿ ನಡೆಸಬೇಕಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ವಿಡಿಯೊ ಚಿತ್ರೀಕರಿಸುವುದು ಕಡ್ಡಾಯವಾಗಿದೆ.
ಎಣಿಕೆಯಲ್ಲಿ ಭಾಗವಹಿಸುವ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಲು ಫೇಸ್ ರೆಕಗ್ನಿಷನ್ ವ್ಯವಸ್ಥೆ ಬಳಸಬೇಕು ಹಾಗೂ ಎಣಿಕೆಗೆ ಪ್ರವೇಶಿಸುವ ಮೊದಲು ಸಿಬ್ಬಂದಿ ತಮ್ಮ ಬಳಿ ಇರುವ
ನಗದು ಮೊತ್ತವನ್ನು ಘೋಷಿಸಬೇಕು. ಚಿನ್ನ, ಬೆಳ್ಳಿ ಸೇರಿದಂತೆ ದೊರೆಯುವ ಅಮೂಲ್ಯ ವಸ್ತುಗಳನ್ನು ಅದೇ ದಿನ ಮೌಲ್ಯಮಾಪನ ಮಾಡಿ ಜಿಲ್ಲಾ ಉಪಖಜಾನೆಗೆ ಜಮಾ ಮಾಡಬೇಕು.
ಹುಂಡಿ ಎಣಿಕೆಗೆ ಸಾರ್ವಜನಿಕರನ್ನು ಬಳಸದೇ, ಗೃಹ ರಕ್ಷಕದಳ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರ ಸೇವೆಯನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ.
ಈ ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಲು ಪರಿಶೀಲನಾ ವ್ಯವಸ್ಥೆಯನ್ನೂ ಸರ್ಕಾರ ಬಲಪಡಿಸಿದೆ. ಸ್ಥಳೀಯ ಕಂದಾಯ, ಪೊಲೀಸ್ ಮತ್ತು ಧಾರ್ಮಿಕ ದತ್ತಿ
ಇಲಾಖೆಯ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಜಂಟಿಯಾಗಿ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಬೇಕು.
ಪ್ರಮುಖ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಿಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಜಂಟಿ ಪರಿಶೀಲನೆ ನಡೆಸಬೇಕು.
ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಅನುಷ್ಠಾನದ ಸ್ಥಿತಿ, ಕಂಡುಬಂದ ನ್ಯೂನತೆಗಳು ಹಾಗೂ ಅವುಗಳನ್ನು ಸರಿಪಡಿಸಲು ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ಜೊತೆಗೆ, ಹುಂಡಿ ಎಣಿಕೆ ಅಥವಾ ದೇಣಿಗೆ ನಿರ್ವಹಣೆಯಲ್ಲಿ ಯಾವುದೇ ಅಕ್ರಮ ಅಥವಾ ಕಳ್ಳತನ ಕಂಡುಬಂದರೆ ಸಂಬಂಧಿತ ದೇವಾಲಯದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಕ್ರಮಗಳ ಮೂಲಕ ದೇವಾಲಯಗಳ ದೇಣಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಇದನ್ನು ಓದಿ : https://vijayatimes.com/instagram-removes-ai-features/