ಕೊಡಗು, ಏ. 05: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದ ಜಿಲ್ಲಾಡಳಿತ, ಈ ಸಂಬಂಧ ಸೋಮವಾರ ಸ್ಪಷ್ಟನೆ ನೀಡಿದೆ.
ಕೊಡಗು ಜಿಲ್ಲಾಧಿಕಾರಿ ಕಳೆದ ಕೆಲವು ದಿನಗಳ ಹಿಂದಷ್ಟೇ ಆದೇಶವೊಂದನ್ನು ಹೊರಡಿಸಿ ಎಲ್ಲ ಪ್ರವಾಸೀ ತಾಣಗಳಿಗೂ ಏಪ್ರಿಲ್ 20ರವರೆಗೆ ಪ್ರವೇಶ ನಿರ್ಬಂಧಿಸಿದ್ದರು. ಆದರೆ ಈ ಆದೇಶ ಸಾಕಷ್ಟು ಗೊಂದಲ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಜಿಲ್ಲಾಡಳಿತ, ಪೂರ್ಣ ವಿವರ ಬಿಡುಗಡೆ ಮಾಡಿದೆ.
ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯ/ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಜಿಲ್ಲಾಡಳಿತ ಗಮನಿಸಿದ್ದು, ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ಕೈಗೊಳ್ಳುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಲಾಗಿತ್ತು. ಉಲ್ಲೇಖದಂತೆ ಹೊರಡಿಸಲಾದ ಆದೇಶಗಳ ಬಗ್ಗೆ ಈ ಕೆಳಕಂಡಂತೆ ಸ್ಪಷ್ಟೀಕರಣ ನೀಡಿದೆ.
- ಜಿಲ್ಲೆಯ ಪ್ರವಾಸಿ ತಾಣಗಳಾದ ಅಬ್ಬಿ ಫಾಲ್ಸ್, ಮಾಂದಾಲ್ಪಟ್ಟಿ, ರಾಜಾಸೀಟ್, ಸನ್ನಿಸೈಡ್ ಮ್ಯೂಸಿಯಂ, ಚೇಲಾವರ ಫಾಲ್ಸ್, ನಾಲ್ಕು ನಾಡು ಅರಮನೆ, ದುಬಾರೆ, ಚಿಕ್ಲಿಹೊಳೆ ಡ್ಯಾಂ, ಹಾರಂಗಿ, ಮಲ್ಲಳ್ಳಿ ಫಾಲ್ಸ್, ಇರ್ಪು ಫಾಲ್ಸ್, ಮಡಿಕೇರಿಯ ರಾಜರ ಗದ್ದುಗೆಗಳಿಗೆ ಏ.20ರವರೆಗೆ ಪ್ರವಾಸಿಗರ, ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ.
- ರೆಸಾರ್ಟ್ಸ್, ಹೋಂ ಸ್ಟೇ ಇತ್ಯಾದಿ ಆತಿಥ್ಯ ಸೇವೆಗಳನ್ನು ಒದಗಿಸುವ ಸ್ಥಳಗಳಲ್ಲಿ ಶಿಷ್ಠಾಚಾರದನ್ವಯ ಕೋವಿಡ್ ಮುನ್ನಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಅಂದರೆ, ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸೇಷನ್, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್ಗಳ ಬಳಕೆಯನ್ನು ಮಾಡುವುದು.
- ಎಲ್ಲಾ ಸ್ವಿಮ್ಮಿಂಗ್ ಪೂಲ್ಗಳು ಏ.20ರವರೆಗೆ ಕಾರ್ಯಾನಿರ್ವಹಿಸುವಂತಿಲ್ಲ.
- ಸರ್ಕಾರದ ಇತ್ತೀಚಿನ ಆದೇಶದಂತೆ ಜಿಮ್ಗಳು ಈ ಕೆಳಕಂಡ ಕ್ರಮಗಳಂತೆ ಕಾರ್ಯಾನಿರ್ವಹಿಸುವುದು.
a) ಆಗಮಿತರ ಸಂಖ್ಯೆ ಏಕಕಾಲದಲ್ಲಿ ಒಟ್ಟು ಸಾಮರ್ಥ್ಯ ಬಲದ 50% ಮೀರದಂತೆ ಕಾರ್ಯಾಚರಿಸುವುದು. ಪ್ರತಿ ಬಳಕೆಯ ನಂತರ ಉಪಕರಣಗಳನ್ನು ಸ್ಯಾನಿಟೈಸ್ ಮಾಡುವುದು.
b) ಶಿಷ್ಠಾಚಾರದನ್ವಯ ಕೋವಿಡ್ ಮುನ್ನಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಅಂದರೆ, ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸೇಷನ್, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್ಗಳ ಬಳಕೆಯನ್ನು ಮಾಡುವುದು.
c) ಮೇಲಿನ ಆದೇಶವನ್ನು ಉಲ್ಲಂಘಿಸಿದಲ್ಲಿ ಸದರಿ ಜಿಮ್ಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುವುದು.