ಇವತ್ತಿನ ಸಿಟಜನ್ ಜರ್ನಲಿಸ್ಟ್ ಕಾರ್ಯಕ್ರಮದಲ್ಲಿ ನಾವು ಕೃಷ್ಣಾ ನದಿ ವಿಷವಾಗುತ್ತಿರುವ ಬಗ್ಗೆ ವರದಿ ನೋಡೋಣ. ಕೃಷ್ಣೆಯ ವಿಷ ನೀರು ಬೆಳಗಾವಿಯ ಮಂದಿಯನ್ನು ಯಾವ ರೀತಿ ಕಾಡಿಸುತ್ತಿದೆ, ಪೀಡಿಸುತ್ತಿದೆ ಅನ್ನೋ ವಿವರ ಇಲ್ಲಿದೆ.
ಇದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಕೂಡ್ಲುವಿನ ಪಂಚಾಯತ್ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿಯೇ ಇಲ್ಲಿನ ಜನರಿಗೆ ಆಧಾರ. ಪ್ರತಿಯೊಂದಕ್ಕೂ ಈ ನದಿಯನ್ನೇ ಇಲ್ಲಿನ ಜನರು ಅವಲಂಬಿಸಿಕೊಂಡಿದ್ದಾರೆ. ಕುಡಿಯೋದ್ರಿಂದ ಹಿಡಿದು ಕೃಷಿ ಚಟುವಟಿಕೆ ವರೆಗೆ ಪ್ರತಿಯೊಂದಕ್ಕೂ ಈ ನದಿಯೇ ಜೀವನಾಧಾರ. ಬೆಳಗಾವಿಯ ಉಗಾರ ಮಂದಿಯ ಜೀವ ನದಿಯಾಗಿರೋ ಕೃಷ್ಣೆಗೆ ವಿಷ ಹಾಕೋ ದುಷ್ಟ ಕೆಲಸ ಮಾಡ್ತಿದ್ದಾರೆ, ಪಂಚಾಯತ್ ಪಟ್ಟಣದ ಅಧಿಕಾರಿಗಳ ಬಳಗ. ಕುಡಿಯಲು, ಅಡುಗೆಗೆ ಬಳಸೋ ನೀರನ್ನು ಸ್ಥಳೀಯ ಆಡಳಿತವೇ ಕಲುಷಿತಗೊಳಿಸಿ ಜನರ ಪ್ರಾಣಕ್ಕೆ ಕಂಟಕಪ್ರಾಯವಾಗಿದೆ. ಊರಿನ ಶೌಚಾಲಯದ ಕಲುಷಿತ ನೀರು ನೇರವಾಗಿ ನದಿಗೆ ಹರಿಯುತ್ತಿದೆ. ಜನರ ವಿರೋಧದ ನಡುವೆಯೇ ಕೃಷ್ಣಾ ನದಿಯ ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯವನ್ನು ಪಂಚಾಯತ್ ಅಧಿಕಾರಿಗಳು ಕಟ್ಟಿಸಿದ್ದಾರೆ. ಬೇರೆ ಕಡೆ ಕಟ್ಟಿಸಿ ಎಂದು ಜನರು ಹೇಳಿದ್ದರೂ ಕಿವಿಗೊಡದೆ ಅಲ್ಲೇ ಕಟ್ಟಿಸಿ ಜನರಿಗೆ ತೊಂದರೆ ನೀಡಿದ್ದಾರೆ ಅನ್ನೋದು ಸ್ಥಳೀಯರ ಆರೋಪ.
ಈ ನದಿ ಸಾವಿರಾರು ಜನರಿಗೆ ಸಾವಿರಾರು ರೀತಿಯಲ್ಲಿ ಉಪಕಾರ ಮಾಡುತ್ತಿದೆ. ಆದರೆ ಈ ನದಿ ನೀರಿಗೆ ಸಾರ್ವಜನಿಕರ ಮಲ ಮೂತ್ರ ನೇರವಾಗಿ ಸೇರುವುದರಿಂದ ಜನ ಮೂಗು ಮುಚ್ಚಿಕೊಂಡೇ ಈ ಭಾಗಕ್ಕೆ ಬರಬೇಕು ಅನ್ನೋದು ಜನರ ಅಳಲು . ಈ ನೀರು ಕಲುಷಿತಗೊಂಡು ಜನ ವಿಷ ನೀರು ಕುಡಿಯುವ ದುಸ್ಥಿತಿ ಒದಗಿದೆ ಅನ್ನೋದು ಜನರ ಅಳಲು. ಇಲ್ಲಿನ ಜನರು ಕಲುಷಿತ ನೀರು ಕುಡಿದು ನಾನಾ ಸಾಂಕ್ರಾಮಿಕ ರೋಗಗಳಿಗೆ ಈಗಾಗಲೇ ತುತ್ತಾಗುತ್ತಿದ್ದಾರೆ. ಇಲ್ಲಿ ಪ್ರಾಣಿ ಪಕ್ಷಿಗಳೂ ನೀರು ಕುಡಿಯುತ್ತವೆ ಜಾನುವಾರುಗಳೂ ಇಲ್ಲಿ ಸ್ನಾನ ಮಾಡುತ್ತಾ ಆನಂದಿಸುತ್ತಿದ್ದವು ಮತ್ತು ನೀರು ಕುಡಿದು ತೃಪ್ತರಾಗುತ್ತಿದ್ದವು ,ಅನ್ನೋದು ಜನರ ಹೇಳಿಕೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ಯಾರೇ ಅನ್ನುತ್ತಿಲ್ಲ. ಪರಿಸರ ಮಲಿನವಾಗುತ್ತಿರುವುದನ್ನು ತಡೆಯುಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ ಅನ್ನೋದು ಜನರ ಆಕ್ರೋಶ. ಇಲ್ಲಿನ ಅಧಿಕಾರಗಳು ಪ್ರಜ್ಞಾವಂತರಾಗಿದ್ದರೆ ಆದಷ್ಟು ಬೇಗ ಎಚ್ಚೆತ್ತುಕೊಂಡು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜನರ ಸಮಸ್ಯೆಗೆ ಸ್ಪಂದಿಸಲಿ ಅನ್ನೋದು ವಿಜಯಾ ಟೈಮ್ಸ್ ಆಶಯವಾಗಿದೆ
- ಮಂಜುನಾಥ್ ಉಗಾರಾ ಕೂಡ್ಲು