ಇದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಬಾರೆ ರಸ್ತೆ… ಇದು ರಸ್ತೆಯೋ ಅಥವಾ ಕೆಸರು ಗದ್ದೆಯೋ ಅನ್ನೋ ಅನುಮಾನ ಈ ರಸ್ತೆಯನ್ನು ನೋಡಿದವರಿಗೆ ಮೂಡುತ್ತೆ. ರಸ್ತೆ ತುಂಬಾ ಇರುವ ಹೊಂಡ ಗುಂಡಿಗಳ ಮಧ್ಯೆ ರಸ್ತೆಯೇ ಕಾಣುವುದಿಲ್ಲ.
ಇನ್ನು ಇಲ್ಲಿ ಮಳೆಗಾಲ ಬಂದರೆ ಸಾಕು ಈ ರಸ್ತೆ ಕೆಸರು ಗದ್ದೆಯಂತಾಗುತ್ತೆ. ಈ ಸಂದರ್ಭದಲ್ಲಿ ಜನ ಈ ರಸ್ತೆಯಲ್ಲಿ ಕಷ್ಟಪಟ್ಟು, ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕು.
ಈ ರಸ್ತೆ ಹೆಗ್ಗಡಿಹಳ್ಳಿ ಮತ್ತು ಕೆಂಬಾರೆ ನಡುವೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಲು ಹಾಗೂ ತಾವು ಬೆಳೆದ ಧಾನ್ಯಗಳನ್ನು ಸಾಗಿಸಲು ಇದೇ ರಸ್ತೆಯನ್ನು ಬಳಸಬೆಕಾಗಿದೆ.
ಈ ರಸ್ತೆಯಲ್ಲಿ ಸಾಮಾನ್ಯವಾಗಿ ಸಂಚರಿಸಲು ಕಷ್ಟ ಪಡುತ್ತಿರುವ ರೈತರು, ತಾವು ಬೆಳೆದ ಧಾನ್ಯಗಳನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇದ್ಯಾವುದೂ ಕೂಡ ಸಂಬಂಧಪಟ್ಟ ಅಧಿಕಾರಿಗಳಿಗಾಲಿ, ಪಂಚಾಯತ್ ಸದಸ್ಯರಿಗಾಗಲೀ, ಕಾಣದೇ ಇರುವುದು ವಿಪರ್ಯಾಸವೇ ಸರಿ.
ಈ ರಸ್ತೆಯಲ್ಲಿ ಕೇವಲ ರೈತರು ಮಾತ್ರವಲ್ಲ ಅನೇಕ ಶಾಲಾ ಕಾಲೇಜು ಮಕ್ಕಳು ಈ ಮಾರ್ಗವಾಗಿಯೇ ಸಂಚರಿಸಬೇಕು. ಆದರೆ ಕೊಚ್ಚೆಯಂತಾದ ಈ ಮಾರ್ಗದಲ್ಲಿ ಓಡಾಡುವುದು ಮಕ್ಕಳಿಗೆ ದು:ಸ್ವಪ್ನದಂತಾಗಿದೆ.
ಇಲ್ಲಿನ ಜನರು ಅನೇಕ ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜತೆಗೆ ಈ ಸಮಸ್ಯೆಯ ಕುರಿತಾಗಿ ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಇನ್ನೆಷ್ಟು ವರ್ಷ ನಾವು ಈ ರೀತಿಯ ರಸ್ತೆಯಲ್ಲಿ ಸಂಚರಿಸಬೇಕು ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಸ್ಥರ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿ. ಜನಪ್ರತಿನಿಧಿಗಳು ಈಗಲಾದ್ರೂ ಕಣ್ತೆರೆದು ಈ ರಸ್ತೆ ದುರಸ್ಥಿಗೆ ಮನಸು ಮಾಡಲಿ ಎಂಬುದು ವಿಜಯಟೈಮ್ಸ್ನ ಆಶಯವಾಗಿದೆ.
ಹಾಸನದಿಂದ ಲೋಕೇಶ್ ಎನ್. ಹೆಗ್ಗಡಿಹಳ್ಳಿ, ವಿಜಯಟೈಮ್ಸ್