ನವದೆಹಲಿ, ಮೇ. 01: ಖ್ಯಾತ ಹಿರಿಯ ಪತ್ರಕರ್ತ ರೋಹಿತ್ ಸರ್ದಾನ ಶುಕ್ರವಾರ ನಿಧನರಾಗಿದ್ದಾರೆ. ಆಜ್ ತಕ್ ಸುದ್ದಿವಾಹಿನಿಯ ಪತ್ರಕರ್ತರಾಗಿದ್ದ ಸರ್ದಾನ ಅವರು ಕೊರೊನಾ ಸೋಂಕಿಗ ತುತ್ತಾಗಿದ್ದು, ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 24ರಂದು ರೋಹಿತ್ ಸರ್ದಾನ ಅವರಿಗೆ ಕೊರೊನಾ ಸೋಂಕು ತಗಲಿತ್ತು. ಈ ಬಗ್ಗೆ ಸರ್ದಾನ ಅವರೇ ಟ್ವೀಟ್ ಮಾಡಿದ್ದರು. ಒಂದು ವಾರದ ಹಿಂದೆ ಜ್ವರ ಮತ್ತು ಇತರ ಲಕ್ಷಣ ಕಾಣಿಸಿಕೊಂಡಾಗ ಪರೀಕ್ಷೆ ನಡೆಸಿದೆ. RTPCR ನೆಗೆಟಿವ್ ಬಂತು. CTScan ಮಾಡಿಸಿದಾಗ ಕೊವಿಡ್ ಇರುವುದು ದೃಢಪಟ್ಟಿದೆ. ಈಗ ಆರೋಗ್ಯ ಸುಧಾರಿಸಿದೆ. ನೀವು ಕೂಡಾ ನಿಮ್ಮ ಮತ್ತು ನಿಮ್ಮ ಕುಟುಂಬದ ಕಾಳಜಿ ವಹಿಸಿ ಎಂದಿದ್ದರು.
ರೋಹಿತ್ ನಿಧನ ಸುದ್ದಿಯನ್ನು ಜೀ ನ್ಯೂಸ್ನ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಟ್ವೀಟ್ ಮಾಡಿದ್ದು, ಕೆಲವು ಹೊತ್ತಿನ ಹಿಂದೆ ಇವಾನ್ ಕರೆ ಮಾಡಿ ವಿಷಯವೊಂದನ್ನು ಹೇಳಿದಾಗ ನನ್ನ ಕೈಕಾಲು ಕಂಪಿಸಿತು. ನನ್ನ ಗೆಳೆಯ ಹಾಗು ಸಹೋದ್ಯೋಗಿ ರೋಹಿತ್ ಸರ್ದಾನ ಅವರ ನಿಧನ ಸುದ್ದಿಯಾಗಿತ್ತು ಅದು . ನಮ್ಮ ಆಪ್ತರೊಬ್ಬರು ವೈರಸ್ಗೆ ಬಲಿಯಾಗುತ್ತಾರೆ ಎಂದು ಊಹಿಸಿರಲಿಲ್ಲ. ಈ ಸುದ್ದಿಯನ್ನು ಸ್ವೀಕರಿಸಲು ನಾನು ಸಿದ್ಧನಿರಲಿಲ್ಲ. ಭಗವಂತ ಮೋಸ ಮಾಡಿಬಿಟ್ಟ ಎಂದು ಬರೆದಿದ್ದಾರೆ.
ಸರ್ದಾನ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸುದ್ದಿ ಮಾಧ್ಯಮದ ಹಿರಿಯರು, ಸಹೋದ್ಯೋಗಿಗಳು ಆಘಾತ ವ್ಯಕ್ತಪಡಿಸಿದ್ದು ಮೃತರಿಗೆ ಸಂತಾಪ ಸೂಚಿಸಿದ್ದಾರೆ.