ಮೈಸೂರು: ಕೆಲವು ತಿಂಗಳುಗಳ ಹಿಂದಷ್ಟೇ ಅರಣ್ಯ ಇಲಾಖೆ ರಾಯಭಾರಿಯಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ಇದೀಗ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ.
ಕಾರ್ಯ ನಿಮಿತ್ತ ಮೈಸೂರು ಪ್ರವಾಸ ಕೈಗೊಂಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್ಗೆ ಭೇಟಿ ನೀಡಿದ್ದರು. ಈ ವೇಳೆ ಕೃಷಿ ಇಲಾಖೆ ರಾಯಭಾರಿ ಆಗುವಂತೆ ನಟ ದರ್ಶನ್ ಅವರನ್ನು ಕೃಷಿ ಸಚಿವ ಬಿಸಿ ಪಾಟೀಲ್ ಮನವಿ ಮಾಡಿದರು ಎನ್ನಲಾಗಿದೆ.
ಸಚಿವ ಬಿ.ಸಿ.ಪಾಟೀಲ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಟ ದರ್ಶನ್ ಯಾವುದೇ ಸಂಭಾವನೆ ಪಡೆಯದೇ, ಕೃಷಿ ಇಲಾಖೆಯ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನಟ ದರ್ಶನ್, ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ.
ಈ ಕುರಿತಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದು, ಮೈಸೂರಿನ ದರ್ಶನ್ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಭೇಟಿ ಯಾಗಿ, ಕೃಷಿ ಇಲಾಖೆಯ ರಾಯಭಾರಿ ಆಗುವಂತೆ ಮನವಿ ಮಾಡಲಾಯಿತು. ಇಂತಹ ಮನವಿಗೆ ಪ್ರತಿಸ್ಪಂದಿಸಿರುವ ನಟ ದರ್ಶನ್, ಯಾವುದೇ ಸಂಭಾವನೇ ಇಲ್ಲದೇ ರಾಯಭಾರಿಯಾಗಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.