ನವದೆಹಲಿ ನ 19 : ನರೇಂದ್ರ ಮೋದಿ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದ ಕಾರ್ಪೊರೇಟ್ ಪರ ಇದ್ದ ಎಲ್ಲಾ ಮೂರು ರೈತ ವಿರೋಧಿ ಕರಾಳ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಗುರು ನಾನಕ್ ಜಯಂತಿಯಂದು ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿದ ಸಂಯುಕ್ತ ಕಿಸಾನ್ ಮೋರ್ಚಾವು ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಹಾಗೂ ಸಂಸದೀಯ ಪ್ರಕ್ರಿಯೆಗಳ ಮೂಲಕ ಈ ನಿರ್ಧಾರ ಕಾರ್ಯಗತವಾಗುವುದನ್ನು ನಿರೀಕ್ಷಿಸುತ್ತದೆ. ಹೀಗೆ ಇದು ಕಾರ್ಯಗತಗೊಂಡರೆ ಒಂದು ವರ್ಷದ ಸುದೀರ್ಘ ಭಾರತದ ರೈತರ ಹೋರಾಟಕ್ಕೆ ಸಂದ ಬಹುದೊಡ್ಡ ಐತಿಹಾಸಿಕ ವಿಜಯವಾಗಲಿದೆ. ಸುಮಾರು 700 ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ .ಲಖೀಂಪುರ್ ಖೇರಿ ಹತ್ಯಾಕಾಂಡ ಸೇರಿದಂತೆ ಹಲವು ಕಡೆಗಳಲ್ಲಿ ಆದ ಗಲಭೆಗಳಿಗೆ ಸರ್ಕಾರವೇ ನೇರ ಕಾರಣವಾಗಿದ್ದು, ಇದನ್ನು ಸರ್ಕಾರ ತಡೆಬಹುದಾಗಿದ್ದು ಆದರೆ ಕೇಂದ್ರ ಏಕ ಪಕ್ಷೀಯ ಆಡಳಿತವೇ ಇದಕ್ಕೆ ಕಾರಣ ಎಂದಿದೆ
ಈ ರೈತರ ಹೋರಾಟ ಕೇವಲ ಮೂರು ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ ಮಾತ್ರವಲ್ಲದೆ ಎಲ್ಲಾ ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಯನ್ನು ಖಾತರಿಪಡಿಸುವ ಶಾಸನದ ಈಡೇರಿಕೆಗಾಗಿ ಕೂಡ ಎಂಬುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಮಂತ್ರಿ ಗಳಿಗೆ ನೆನಪಿಸಲು ಬಯಸುತ್ತದೆ. ರೈತರ ಈ ಬಹು ಮುಖ್ಯ ಬೇಡಿಕೆ ಈಗಲೂ ಇತ್ಯರ್ಥ ಆಗಿಲ್ಲ.ಹಾಗೇಯೇ ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ಸಾತಿಯ ಆಗ್ರಹವೂ ಹಾಗೇ ಇದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ತಕ್ಷಣದಲ್ಲೇ ಸಭೆ ನಡೆಸಿ ತನ್ನ ತೀರ್ಮಾನವನ್ನು ಪ್ರಕಟಿಸಲಿದೆ ಎಂದು ಕಿಸಾನ್ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.