ಮೈಸೂರು, ಡಿ. 31: ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ದಂಡ ಸಂಗ್ರಹಿಸುವ ಜಾಗದಲ್ಲಿ ಉಚಿತವಾಗಿ ಮಾಸ್ಕ್ ವಿತರಿಸಲಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದ್ದಾರೆ.
ಕೂಲಿ ಕಾರ್ಮಿಕ ಮಹಿಳೆಯ ಬಳಿ ಮಾಸ್ಕ್ ಧರಿಸಿಲ್ಲವೆಂದು ಪೊಲೀಸರು ದಂಡ ವಸೂಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ, ಈ ಕುರಿತು ಎಚ್.ಸಿ.ಮಹದೇವಪ್ಪ ಆಕ್ರೋಶವ್ಯಕ್ತಪಡಿಸಿದ್ದಾರೆ. ಮಾಸ್ಕ್ ಧರಿಸದ್ದಕ್ಕಾಗಿ ಜನ ಸಾಮಾನ್ಯರನ್ನು, ಕೂಲಿ ಕಾರ್ಮಿಕರನ್ನು ಪೀಡಿಸುತ್ತಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ಬಡವರ ಶ್ರಮದ ಮೌಲ್ಯ ತಿಳಿಯದೇ ದುರಾಹಂಕಾರದಿಂದ ವರ್ತಿಸುವ ಪ್ರಭುತ್ವದ ಕ್ರೌರ್ಯ ನಿಲ್ಲಲಿ. ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ದಂಡ ಸಂಗ್ರಹಿಸುವ ಜಾಗದಲ್ಕಿ ಉಚಿತವಾಗಿ ಮಾಸ್ಕ್ ವಿತರಿಸಲಿ ಎಂದು ಹೇಳಿದ್ದಾರೆ. ನಿರುದ್ಯೋಗಕ್ಕೆ ಪರಿಹಾರವಿಲ್ಲ, ಆರ್ಥಿಕತೆಯ ಸುಧಾರಣೆಯಂತೂ ಮೊದಲೇ ಇಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೂಡಾ ಆಡಳಿತಾತ್ಮಕ ವೈಫಲ್ಯದಿಂದ ನರಳುತ್ತಿವೆ. ನಿರುದ್ಯೋಗಕ್ಕೆ ಪರಿಹಾರವಿಲ್ಲ, ಆರ್ಥಿಕತೆಯ ಸುಧಾರಣೆಯಂತೂ ಮೊದಲೇ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೂ ಕೂಡಾ ಬಿಜೆಪಿ ಪಕ್ಷದವರಿಗೆ ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿದ್ದೇ ದೊಡ್ಡ ಸಮಸ್ಯೆಯಾಗಿದೆ. ಎಂತಾ ದುರಂತ ಇದು ಎಂದು ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.