ನವದೆಹಲಿ ಜ 3 :ರೈತರು ನನಗಾಗಿ ಪ್ರಾಣ ಕಳೆದುಕೊಂಡರಾ ಎಂಬ ಪ್ರಧಾನಿ ಅವರ ಉತ್ತರದ ವಿರುದ್ದ ಸತ್ಯಪಾಲ್ ಮಲ್ಲಿಕ್ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಕೃಷಿ ಕಾಯ್ದೆ ವಿಚಾರವಾಗಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಮತ್ತೆ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹರ್ಯಾಣದ ಚರ್ಕಿ ದಾದ್ರಿ ಎಂಬ ಸ್ಥಳದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ವಿವಾದಿತ ಕೃಷಿ ಕಾಯ್ದೆ ಸಂಬಂಧ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಇತ್ತೀಚೆಗೆ ಭೇಟಿ ಮಾಡಿದೆ. ಆದರೆ ನನ್ನ ಮತ್ತು ಅವರ ಮಾತುಕತೆ ಗಲಾಟೆಯೊಂದಿಗೆ ಕೊನೆಗೊಂಡಿತು. ಕೇವಲ ಐದು ನಿಮಿಷದ ಮಾತುಕತೆ ವೇಳೆ ದರ್ಪ ಪ್ರದರ್ಶಿಸಿದರು’ ಎಂದು ಹೇಳಿದರು.
‘ಈ ಕಾಯ್ದೆಯಿಂದಾಗಿ ನಮ್ಮದೇ 500 ರೈತರು ಪ್ರಾಣ ಕಳೆದುಕೊಂಡರು ಎಂದು ನಾನು ಪ್ರಧಾನಿಯವರೊಂದಿಗೆ ಹೇಳಿದೆ. ಅಗ ಪ್ರಧಾನಿ, ಅವರು ನನಗಾಗಿ ಸತ್ತರಾ? ಎಂದು ಪ್ರಶ್ನೆ ಮಾಡಿದರು’ ಎಂದು ಮಲಿಕ್ ಹೇಳಿದ್ದಾರೆ.
‘ಹೌದು, ನೀವು ದೊರೆ ಆಗಿರುವುದರಿಂದ ನಿಮಗಾಗಿಯೇ ಅವರು ಸತ್ತಿದ್ದಾರೆ. ಅವರೊಂದಿಗಿನ ಮಾತುಕತೆ ಜಗಳದೊಂದಿಗೆ ಕೊನೆಯಾಯ್ತು. ಅಮಿತ್ ಶಾ ಅವರನ್ನು ಭೇಟಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ನನಗೆ ನಿರ್ದೇಶಿಸಿದರು’ ಎಂದು ಮಲಿಕ್ ಅವರು ಪ್ರಧಾನಿಯೊಂದಿಗಿನ ಭೇಟಿಯ ಅನುಭವ ವಿವಿರಿಸಿದ್ದಾರೆ.
ಕೃಷಿ ಕಾಯ್ದೆ ಸಂಬಂಧ ಪ್ರಧಾನಿ ಮೋದಿ ನಡೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಅವರು, ‘ಒಂದು ನಾಯಿ ಸತ್ತರೆ, ಪ್ರಧಾನಿ ದುಃಖ ಪತ್ರವನ್ನು ಕಳುಹಿಸುತ್ತಾರೆ’ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ರೈತರ ಮೇಲೆ ಸರ್ಕಾರ ದಾಖಲು ಮಾಡಿದರುವ ಕಾನೂನು ಮೊಕದ್ದಮೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಗ್ರಹಿಸಿದರು. ಅಲ್ಲದೇ ಕನಿಷ್ಠ ಬೆಂಬಲ ಬೆಲೆ ರೂಪಿಸಲು ಕಾನೂನು ತರಬೇಕು ಎಂದು ವಿನಂತಿಸಿದರು.