ಬೆಂಗಳೂರು, ನ. 27: ಕರ್ನಾಟಕ ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಮೊದಲ ಅಧ್ಯಕ್ಷರಾಗಿ ಎಸ್. ನರೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಆ ಮೂಲಕ ಸವಿತಾ ಸಮಾಜದ ಬಹುದಿನಗಳ ಕನಸನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಿದೆ.ಈ ನಿಗಮಕ್ಕೆ ಅತ್ಯಂತ ಕ್ರಿಯಾಶೀಲ ಹಾಗೂ ದೂರದೃಷ್ಟಿ ನಾಯಕ ನರೇಶ್ ಕುಮಾರ್ ಅವರ ಆಯ್ಕೆಯನ್ನು ಸವಿತಾ ಸಮಾಜದ ನಾಯಕರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ನರೇಶ್ ಕುಮಾರ್ ಬಿಜೆಪಿಯ ಅತ್ಯಂತ ಪ್ರಾಮಾಣಿಕ ಕಾರ್ಯಕರ್ತನಾಗಿದ್ದು, ಇವರು ಪಕ್ಷದಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರು ವಿದ್ಯಾರ್ಥಿದೆಸೆಯಿಂದಲೇ ನಾನಾ ಹೋರಾಟಗಳನ್ನು ಮಾಡಿದ್ದಾರೆ. ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ನರೇಶ್ ಕುಮಾರ್ ಸಮಾಜದ ಏಳಿಗೆಯ ಬಗ್ಗೆ ಉನ್ನತ ಕಲ್ಪನೆಯನ್ನು ಹೊಂದಿದ್ದಾರೆ.
ಸವಿತಾ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಅಲ್ಲದೆ ಈ ಸಮಾಜ ಆಳುವವರಿಂದ ನಿರ್ಲಕ್ಷö್ಯಕ್ಕೊಳಗಾಗಿರುವುದರಿಂದ ಪ್ರಗತಿಯನ್ನೇ ಕಂಡಿಲ್ಲ. ಹಾಗಾಗಿ ಈ ಜನಾಂಗದ ನಿರುದ್ಯೋಗಿಗಳ, ಯುವಕರ, ಮಹಿಳೆಯರ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಈ ನಿಗಮ ರಚನೆ ಅತ್ಯಂತ ಸಹಕಾರಿಯಾಗಲಿದೆ. ಈ ಸಮಾಜದ ಏಳಿಗೆಗೆ ನಾನಾ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಅದನ್ನು ಜಾರಿಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಸರ್ಕಾರದಿಂದ ಅನುದಾನ ತಂದು ಅದನ್ನು ಸಮಾಜದ ಏಳಿಗೆಗೆ ಬಳಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ನರೇಶ್ ಕುಮಾರ್ ತಿಳಿಸಿದ್ದಾರೆ.